ಹಲ್ಲೆ: ಪೊಲೀಸ್ ಸಿಬ್ಬಂದಿ ಅಮಾನತಿಗೆ ಆಗ್ರಹ

ಸುರಪುರ: ಯುವ ಮುಖಂಡ ದುಂಡಪ್ಪ ಜಮಾದಾರ ಮೇಲೆ ಹಲ್ಲೆ ನಡೆಸಿದ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ 6 ಸಿಬ್ಬಂದಿಯ ಅಮಾನತಿಗೆ ಆಗ್ರಹಿಸಿ ಇಲ್ಲಿನ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಮುಖಂಡರು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮುಖಂಡ ಹೊನ್ನಪ್ಪ ತಳವಾರ ಮಾತನಾಡಿ, ‘ಕಬ್ಬಲಿಗ ಸಮಾಜದ ಯುವ ಮುಖಂಡ ದುಂಡಪ್ಪ ಸಿದ್ರಾಮಪ್ಪ ಜಮಾದಾರ ಪಿಸ್ತೂಲ್ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಬಂಧಿಸಿ ಠಾಣೆಯಲ್ಲಿ ಪೊಲೀಸರು ಮನ ಬಂದಂತೆ ಹಲ್ಲೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಿಂದ್ರಪ್ಪಗೌಡ ಮಾಲಿ ಪಾಟೀಲ ದೇವರಗೋನಾಲ ಮಾತನಾಡಿ, ‘ಹಲ್ಲೆಗೊಳಗಾದ ದುಂಡಪ್ಪ ಜಮಾದಾರ ಕಲಬುರಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ವಿನಾ ಕಾರಣ ಅವರನ್ನು ಬಂಧಿಸಿ ಅವರ ಘನತೆಗೆ ಧಕ್ಕೆ ತರಲಾಗಿದೆ’ ಎಂದು ದೂರಿದರು.
ಮೌನೇಶ ಆರ್.ಭೋವಿ ಮಾತನಾಡಿ, ‘ಪೊಲೀಸರ ಮೇಲೆ ತಕ್ಷಣ ಕೊಲೆ ಯತ್ನ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ, ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ವಿಳಂಬ ನೀತಿ ಅನುಸರಿಸಿದರೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.
ಲಕ್ಷ್ಮಣ ಕಮತಗಿ, ವೆಂಕಟೇಶ ದೊಡ್ಡಮನಿ, ಮಂಜುನಾಥ ಮುದ್ನೂರು, ವೆಂಕಟೇಶ ಚಟ್ನಳಿ, ದೊಡ್ಡಪ್ಪ ಮುದ್ನೂರು, ದೇವಿಂದ್ರಪ್ಪ ಮಾಚಗುಂಡಾಳ, ಯಲ್ಲಪ್ಪ ನಗನೂರ, ಮಲ್ಲು, ಶ್ರೀಕಾಂತ ರತ್ತಾಳ, ಭೈರಣ್ಣ ಅಂಬಿಗೇರ, ಮರೆಪ್ಪ ವೆಂಕಟಾಪುರ, ನಿಂಗು ಕಮತಗಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.