ಸುರಪುರ: ‘ಸರ್ಕಾರ ನೀಡಿರುವ ಗಡುವಿನಲ್ಲಿ ಸಮೀಕ್ಷೆ ಮುಗಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಮುಂಗಾರು ಹಂಗಾಮಿನ ರೈತರಿಂದಲೇ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಕ್ಕೇರಾ ಭಾಗದಲ್ಲಿ 19,834 ಎಕರೆ ಬೆಳೆಯಲ್ಲಿ 1,448 ಎಕರೆ ಮಾತ್ರ ಬೆಳೆ ಸಮೀಕ್ಷೆಗೆ ಒಳಪಡಿಸಲಾಗಿದೆ. ಕೆಂಭಾವಿ ಹೋಬಳಿಯಲ್ಲಿ 24,339 ಎಕರೆಯಲ್ಲಿ 1,832 ಎಕರೆ ಮಾತ್ರ ಬೆಳೆ ಸಮೀಕ್ಷೆಗೆ ನೊಂದಾಯಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆಯ ಕರ್ತವ್ಯದಲ್ಲಿರುವ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತಮಗೆ ಕೆಲಸವೇ ಇಲ್ಲವೆಂದು ನಿಶ್ಚಯಿಸಿಬಿಟ್ಟಿದ್ದಾರೆ. ಇದರಿಂದ ಕೇವಲ ಶೇ 5 ಗುರಿ ಸಾಧಿಸಲಾಗಿದೆ. ಉಳಿದಿರುವ 20 ದಿನದಲ್ಲಿ ಶೇ 95ರಷ್ಟು ಗುರಿ ತಲುಪಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು’ ಎಂದು ಖಡಕ್ ಆಗಿ ನಿರ್ದೇಶನ ನೀಡಿದರು.
ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ್ ರಂಗರಾವ್ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಶೇ 19 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಮಾಹಿತಿ ಇಲ್ಲದ ರೈತರಿಗೆ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ವರದಿ ದಾಖಲಿಸಿಕೊಳ್ಳುವುದನ್ನು ತಿಳಿಸಿಕೊಡಬೇಕು’ ಎಂದು ಸೂಚನೆ ನೀಡಿದರು.