ಗುರುಮಠಕಲ್ (ಯಾದಗಿರಿ ಜಿಲ್ಲೆ): ಮುಂಗಾರು ಹಂಗಾಮಿನ ಮಳೆ ಅಭಾವದಿಂದಾಗಿ ಕಂಗೆಟ್ಟ ತಾಲ್ಲೂಕಿನ ಪಾಡುಪಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಕತ್ತೆಯನ್ನು ಪೂಜಿಸಿ ಮೆರವಣಿಗೆ ಮಾಡಿದ್ದಾರೆ.
ಮೃಗಶಿರ ಮಳೆ ಕೈಕೊಟ್ಟಿದ್ದು, ಮಧ್ಯಂತರ ಬೆಳೆಗಳಾದ ಹೆಸರು ಮತ್ತು ಉದ್ದು ಬೆಳೆಗಳು ಈ ಬಾರಿ ಪಡೆಯದಂತಾಗಿದೆ. ಜೊತೆಗೆ ಮೃಗಶಿರ ಕಳೆದ ನಂತರವಾದರೂ ಮಳೆ ಬರುತ್ತದೆಂಬ ನಿರೀಕ್ಷೆಯೂ ಫಲಿಸಲಿಲ್ಲ.
ಹೀಗಾಗಿ ಮಳೆಗಾಗಿ ಗ್ರಾಮದಲ್ಲಿ ಕತ್ತೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆಂಬ ನಂಬಿಕೆಯಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
ಮಂಗಳ ಮೇಳವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದು, ಮೆರವಣಿಗೆ ವೇಳೆ ‘ಬಾರೋ, ಬಾರೋ ಮಳೆರಾಯ’ ಎಂದು ಪ್ರಾರ್ಥನೆ ಮಾಡುತ್ತಾ ಸಾಗಿದರು.
ಈ ವೇಳೆ ಶ್ರೀನಿವಾಸ, ಮೋಹನರೆಡ್ಡಿ, ಕೃಷ್ಣಾರೆಡ್ಡಿ, ಬಲರಾಮ, ಬಂಡೆಪ್ಪ, ಜಗದೀಶ, ಸಾಬಣ್ಣ, ರಾಜಪ್ಪ, ಶಂಕರರೆಡ್ಡಿ, ಶರಣಪ್ಪ, ಬಸಪ್ಪ ಇದ್ದರು.