ಯರಗೋಳ: ಬೆಳಗೇರಾ ಗ್ರಾಮದಲ್ಲಿ ಭಾನುವಾರ ನಡೆದ ಪರಿಸರ ಕಾಳಜಿ ಮದುವೆಯಲ್ಲಿ ನವದಂಪತಿ ವೆಂಕಟೇಶ ಮತ್ತು ಚಾಮುಂಡೇಶ್ವರಿ ತಮ್ಮನ್ನು ಶುಭ ಹಾರೈಸಿದ ಬಂಧುಗಳು, ಆಪ್ತರು ಮತ್ತು ಸ್ನೇಹಿತರಿಗೆ ವಿವಿಧ ಬಗೆಯ ಸಸಿಗಳನ್ನು ನೀಡಿದರು.
ಮರೆಮ್ಮ ತಿಪ್ಪಣ್ಣ ಪೂಜಾರಿ ಪಸ್ಪೂಲ್ ಅವರ ಪುತ್ರ ವೆಂಕಟೇಶ ಮತ್ತು ಕನ್ಯಾಕೋಳೂರು ಗ್ರಾಮದ ಜಯಶ್ರೀ ಪೂಜಪ್ಪ ಅವಡಿಯವರ ಪುತ್ರಿ ಚಾಮುಂಡೇಶ್ವರಿ ವಿನೂತನ ರೀತಿ ಮದುವೆಯಾದರು.
ಬಣ್ಣದ ಹೂಗಳಿಂದ ಅಲಂಕೃತ ಬಟ್ಟೆ ಪರದೆಯ ಮೇಲೆ ದಂಪತಿ ಹೆಸರಿನ ಜೊತೆ ‘ಪರಿಸರ ಉಳಿಸಿ, ಪರಿಸರ ಬೆಳೆಸಿ’ ಎಂಬ ಸಾಲುಗಳಿದ್ದವು. ಮದುವೆಗೆ ಬಂದವರಿಗೆ ಕರಿಬೇವು, ಮಾವು, ಸೀತಾಫಲ, ಬೇವು, ಲಿಂಬೆ, ಅಶೋಕ, ನೇರಳೆ ಮುಂತಾದ ಸಸಿಗಳನ್ನು ನೀಡಲಾಯಿತು.
‘ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾದ ನನಗೆ ಗಿಡ, ಮರಗಳೆಂದರೆ ಪ್ರೀತಿ. ನಮ್ಮೂರಿನ ಪಕ್ಕದ ಹತ್ತಿಕುಣಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಜಾತಿಯ1 ಸಾವಿರ ಗಿಡಗಳನ್ನು ಖರೀದಿಸಿ, ಅತಿಥಿಗಳಿಗೆ ವಿತರಿಸಿದೆ’ ಎಂದು ವರ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.