ಯಾದಗಿರಿ: ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೈಗಾರಿಕಾ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು.ಕೊರೊನಾ ನಿಯಂತ್ರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಕೊರೊನಾ ನಿಯಂತ್ರಣದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚನ್ಯಾಯಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್ಮಾತನಾಡಿ, ಕೋವಿಡ್-19 ನಿಯಂತ್ರಿಸುವ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳಗಿದೆ ಎಂದು ಆರೋಪಿಸಿದರು.
ಕೋವಿಡ್-19 ನಿಯಂತ್ರಿಸಲು ಸರ್ಕಾರ ಖರೀದಿಸಿರುವ ಸಾಮಗ್ರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಎಂಟು ವಿವಿಧ ಇಲಾಖೆಗಳಿಂದ ಇದುವರೆಗೆ ₹4167 ರೂಪಾಯಿ ಬಿಡುಗಡೆ ಮಾಡಿದ್ದು, ಸರ್ಕಾರವು ವೆಂಟಿಲೇಟರ್ಗಳು, ಪಿಪಿಇ ಕಿಟ್ಗಳು, ಹ್ಯಾಂಡ್ ಸ್ಯಾನಿಟೈಜರ್, ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರಕ್ಕೆ ಖರೀದಿ ಮಾಡಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ಮಾಜಿ ಸದಸ್ಯ ಚೆನ್ನಾರೆಡ್ಡಿ ತುನ್ನೂರ ಮಾತನಾಡಿ, ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ-1961ಕ್ಕೆ ಸುಗ್ರಿವಾಜ್ಞೆಯ ಮೂಲಕ ತಿದ್ದುಪಡಿ ತಂದು ಬಂಡವಾಳಶಾಹಿಗಳಿಗೆ ಕೊಡುಗೆ ನೀಡಿ ಕಾಯ್ದೆಯಆತ್ಮದಂತಿದ್ದ ಸೆಕ್ಷನ್-64,79-ಎ,29(ಬಿ),79(ಸಿ) ಮತ್ತು 80ನ್ನು ನಿಷ್ಕ್ರಿಯಗೊಳಿಸಿದೆ ಎಂದು ಆರೋಪಿಸಿದರು.
1974ರಲ್ಲಿ ಉಳುವವನೇ ಭೂಮಿಯ ಒಡೆಯನಾಗಬೇಕು ಎಂಬುದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಭೂಸುಧಾರಣಾ ಕಾಯಿದೆಯ ಉದ್ದೇಶವಾಗಿತ್ತು. ಆದರೆ, ಬಿಜೆಪಿ ಸರ್ಕಾರ ಉಳ್ಳವನೇ ಭೂಮಿಯ ಒಡೆಯನಾಗಬೇಕು ಎಂಬ ತನ್ನ ಧೋರಣೆ ಸಾಬೀತುಪಡಿಸಿದೆ. ರೈತವಿರೋಧಿ ಸುಗ್ರಿವಾಜ್ಞೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಕಲಬುರ್ಗಿ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಮಾತನಾಡಿ, ರಾಜ್ಯದ ಜನತೆಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಸ್ಯಾಂಸನ್ ಮಾಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಲಾಯಕ್ ಹುಸೇನ್ ಬಾದಲ್, ಮಲ್ಲಣ್ಣ ದಾಸನಕೇರಿ, ರಾಘವೇಂದ್ರ ಮಾನಸಗಲ್, ಭೀಮರಾಯ ಠಾಣಗುಂದಿ, ಮಂಜೂಳ ಗೂಳಿ, ಮಾಣಿಕರೆಡ್ಡಿ ಕುರಕುಂದಿ, ಸುರೇಶ ಜೈನ್, ಜಹೀರ್ ಸವೇರಾ, ನಗರಸಭೆ ಸದಸ್ಯರಾದ ಗಣೇಶ ಮುಂಡಾಸ, ವೆಂಕಟರೆಡ್ಡಿ ವನಿಕೇರಿ, ಹಣಮಂತ ನಾಯಕ, ಮುಂಚೂಣಿ ಘಟಕಗಳ ಅಧ್ಯಕ್ಷ ಸಿದ್ದಪ್ಪ ಲಿಂಗೇರಿ, ಸಾಬರೆಡ್ಡಿ ಕಲಬುರ್ಗಿ, ಸಂಜಯಕುಮಾರ ಕಾವಲಿ, ಲಕ್ಷ್ಮಣ ರಾಠೋಡ, ಪಕ್ಷದ ಕಾರ್ಯಕರ್ತರಾದ, ಹಣಮಂತ ಅಚ್ಚೋಲಾ, ಸೋಮಶೇಖರ ಸಾಹುಕಾರ, ಅಭಿಷೇಕ ದಾಸನಕೇರಿ, ದೇವರಾಜ ಮುಷ್ಟೂರ, ಮಲ್ಲಿಕಾರ್ಜುನ ಬಬಲಾದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.