ಯಾದಗಿರಿ: ಹೋಂ ಕ್ವಾರಂಟೈನ್ನಲ್ಲಿ ಇರುವ ಬದಲು ಹೊರಗಡೆ ಓಡಾಟ ನಡೆಸಿದ್ದರಿಂದ ವಡಗೇರಾ ತಾಲ್ಲೂಕಿನ ಬೀರನಕಲ್ ತಾಂಡಾ ಮತ್ತು ಕಮಲನಾಯಕ ತಾಂಡಾಗಳಿಗೆ ನಾಲ್ವರ ಮೇಲೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಆರೋಪಿಗಳ ಮೇಲೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಹಂತದಲ್ಲಿದೆ. ಇವರನ್ನು ಪುನಃ ಕ್ವಾರಂಟೈನ್ ಕೇಂದ್ರದಲ್ಲಿ ಅವಲೋಕನೆಗಾಗಿ ಇರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಮಾಹಿತಿ ನೀಡಿದ್ದಾರೆ.
ಹೋಂ ಕ್ವಾರಂಟೈನ್ ನಿಗಾದಲ್ಲಿರುವ ಜನರು, ತಮ್ಮ ಕ್ವಾರಂಟೈನ್ ಸಮಯ ಮುಗಿಯುವವರೆಗೆ ಕಡ್ಡಾಯವಾಗಿ ಮನೆಯಲ್ಲೇ ಇರತಕ್ಕದ್ದು. ಒಂದು ವೇಳೆ ಹೊರಗಡೆ ತಿರುಗಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಅಂತವರನ್ನು ಮತ್ತೆ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.