ಸೈದಾಪುರ: ‘ಕುರಿ, ಹೊಲ, ಮನೆಯಷ್ಟೇ ನಿಮ್ಮ ಆಸ್ತಿಯಲ್ಲ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡುವ ಮೂಲಕ ದೇಶವೇ ಆಸ್ತಿ ಎನ್ನುವ ಭಾವನೆಯ ಶಕ್ತಿಯನ್ನು ಮನೆ ಮನೆಗೆ ಕೊಡಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರ ತರಬೇಕು ಎಂದು ಕಾಗಿನೆಲೆ ಕನಕ ಗುರುಪೀಠ, ತಿಂಥಣಿ ಬ್ರಿಜ್ನ ಸಿದ್ಧರಾಮಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವಂತ್ರಾಯಗೌಡ ಪೊಲೀಸ್ ಪಾಟೀಲ್ ಲೇಔಟ್ನಲ್ಲಿ ವಲಯ ಕರ್ನಾಟಕ ಪ್ರದೇಶ ಕುರುಬ ಸಂಘ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘ ಹಾಗೂ ಯಾದಗಿರಿ ಸರ್ಕಾರಿ ನೌಕರರ ಸಂಘ ಇವರ ಸಹಯೋಗದಲ್ಲಿನಡೆದ ದಾಸಶ್ರೇಷ್ಠ ಭಕ್ತ ಕನಕದಾಸರ ಮೂರ್ತಿ ಲೋಕಾರ್ಪಣೆ ಹಾಗೂ ಕುರುಬರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕನಕದಾಸರು ಇದ್ದ ಕಡೆ ಅನ್ಯಾಯ, ಜಾತೀಯತೆ, ದುಶ್ಚಟಗಳು ಇರಬಾರದು. ಅದಕ್ಕಾಗಿಯೇ ನಾವು ಹಳ್ಳಿಗಳಲ್ಲಿ ಮಂಟಪಗಳನ್ನು ಕಟ್ಟಿಸಿ ಕನಕದಾಸರನ್ನು ಆಹ್ವಾನಿಸುತ್ತೇವೆ. ದೇಶ ಮತ್ತು ರಾಜ್ಯದಲ್ಲಿ ನಮ್ಮ ಹಕ್ಕು ಮತ್ತು ಪಾಲನ್ನು ಪಡೆಯಲು ಮೊದಲು ನಾವು ಸಂಘಟಿತರಾಗಬೇಕು. ಆರ್ಥಿಕವಾಗಿ ಬಲಿಷ್ಠರಾಗಲು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು’ ಎಂದರು.
ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ: ಮೆರವಣಿಗೆಗಳು ನಮ್ಮ ಬೌದ್ಧಿಕ ಶಕ್ತಿಯನ್ನು ಕುಂದಿಸುತ್ತವೆ. ಆದ್ದರಿಂದ ವಿಚಾರ ಸಂಕಿರಣ, ಸಭೆ, ಸಮಾರಂಭಗಳಲ್ಲಿ ಮೆರವಣಿಗೆಯನ್ನು ಆದಷ್ಟು ಕಡಿಮೆ ಮಾಡಿ ವಿಚಾರವನ್ನು ತಿಳಿದುಕೊಳ್ಳುವ ಹೆಚ್ಚಿನ ಮಹತ್ವವನ್ನು ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ್, ಪ್ರಭುಲಿಂಗ ವಾರಾದ, ವಿಶ್ವನಾಥ ನೀಲಹಳ್ಳಿ, ಭೀಮಶಪ್ಪ ಜೇಗರ್, ರಾಜ್ಯಾಧ್ಯಕ್ಷ ಎಂ. ಈರಣ್ಣ, ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರು, ವಲಯಾಧ್ಯಕ್ಷ ರವಿಕುಮಾರ ಕಡೇಚೂರು, ಮಾಳಪ್ಪ ಅರಿಕೇರಿ, ಆನಂದ ವಾರಾದ, ಮಹಾದೇವ ಮುನಗಾಲ, ಸಿದ್ದು ಪೂಜಾರಿ, ಶಿವುಕುಮಾರ ಮುನಗಾಲ, ಪರಮೇಶ ವಾರಾದ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜೆಸ್ಕಾಂ, ಸಿಬ್ಬಂದಿ ವರ್ಗದವರು, ಸುತ್ತಲಿನ ಗ್ರಾಮಸ್ಥರು ಇತರರಿದ್ದರು.
ಶಾಸಕರಿಂದ ಮೂರ್ತಿ ಲೋಕಾರ್ಪಣೆ
ಸಿದ್ಧರಾಮಾನಂದಪುರಿ ಸ್ವಾಮೀಜಿಯನ್ನು ರಥದಲ್ಲಿ ಕೂರಿಸಿ ಗಂಜ್ನಿಂದ ಅಂಬಿಗರ ಚೌಡಯ್ಯ ವೃತ್ತ ಬಸವೇಶ್ವರ ವೃತ್ತದಿಂದ ಕನಕ ವೃತ್ತದವರೆಗೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮಾಡಲಾಯಿತು. ಬಳಿಕ ಕನಕ ವೃತ್ತದಲ್ಲಿ ನಿರ್ಮಿಸಿದ ನೂತನ ಕನಕ ಮೂರ್ತಿಯನ್ನು ಶಾಸಕ ಶರಣಗೌಡ ಕಂದಕೂರು ಹಾಗೂ ಸ್ವಾಮೀಜಿ ಲೋಕಾರ್ಪಣೆಯನ್ನು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.