ಯಾದಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಖಾಲಿಗೆ ಹುದ್ದೆಗೆ ಬಳ್ಳಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಶ್ರೀನಿವಾಸರೆಡ್ಡಿ ಅವರನ್ನು ಯಾದಗಿರಿ ಡಿಡಿಪಿಐ ಆಗಿ ಬಡ್ತಿ ನೀಡಿ ಸರ್ಕಾರ ನಿಯುಕ್ತಿಗೊಳಿಸಿದೆ.
ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜನವರಿ 13ರಂದು ನಿಯುಕ್ತಿ ಆದೇಶ ಹೊರಡಿಸಿದ್ದು, ಶುಕ್ರವಾರ ಶ್ರೀನಿವಾಸರೆಡ್ಡಿ ಯಾದಗಿರಿ ಡಿಡಿಪಿಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
3 ತಿಂಗಳಿಂದ ಡಿಡಿಪಿಐ ಹುದ್ದೆ ಖಾಲಿ ಶೀರ್ಷಿಕೆಯಡಿ ‘ಪ್ರಜಾವಾಣಿ’ ಇದೇ ಜನವರಿ 7ರಂದು ವಿಶೇಷ ವರದಿ ಪ್ರಕಟಿಸಿತ್ತು. ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಲ್ಲದೆ ಶಿಕ್ಷಣ ಗುಣಮಟ್ಟ ಕುಸಿದಿರುವ ಬಗ್ಗೆ ಪ್ರಜಾವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು.
ಕಲಬುರ್ಗಿ ಶಿಕ್ಷಣ ಇಲಾಖೆ ಆಯುಕ್ತಾಲಯದ ಸಕ್ರೆಪ್ಪಗೌಡ ಬಿರಾದಾರ ಅವರು ಯಾದಗಿರಿಯಲ್ಲಿ ಮೂರು ದಿನ ಮಾತ್ರ ಡಿಡಿಪಿಐ ಆಗಿ ಕೆಲಸ ಮಾಡುತ್ತಿದ್ದರು. ಇದರಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.
ಅದರಂತೆ ಯಾದಗಿರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲದ ಖಾಲಿ ಹುದ್ದೆಗೆ ಅಶೋಕ ಭೀಮಪ್ಪ ಭಜಂತ್ರಿ ಅವರನ್ನು ಸರ್ಕಾರ ನೇಮಕ ಮಾಡಿದೆ.