ಸುರಪುರ: ನಗರದ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆಯ (ಹಾಲೋಕಳಿ) ಮೂರನೇ ದಿನವಾದ ಬುಧವಾರ ಭಕ್ತರ ಸಂಖ್ಯೆ ವಿರಳವಾಗಿತ್ತು. ಬೆಳಿಗ್ಗೆ ದೇವಸ್ಥಾನಕ್ಕೆ ಅಗಮಿಸುವರ ಸಂಖ್ಯೆ ತುಸು ಹೆಚ್ಚಾಗಿ, ಕ್ರಮೇಣ ತಗ್ಗಿತು.
ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಆಗಲೂ ಹೆಚ್ಚಿನ ಭಕ್ತರು ಇರಲಿಲ್ಲ. ಜಾತ್ರೆಯ ಪ್ರಮುಖ ಆಕರ್ಷಣೆಯಾದ ದೇವರ ಕಂಬಾರೋಹಣಕ್ಕೆ ಮಂಗಳವಾರದಂದು ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನರು ಜಮಾವಣೆಗೊಂಡಿದ್ದರು.
ಜಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಆಗದಿರುವುದು ಕಂಡುಬಂತು. ಎರಡು ಗಂಟೆಯಲ್ಲಿ ಕಂಬಾರೋಹಣ ಮುಗಿದು ಜನರು ಕರಗಿದ್ದು, ಕಂಡು ಪೊಲೀಸರು ನಿರಾಳರಾದರು.
ಬುಧವಾರ ಬೆಳಿಗ್ಗೆ ನಡೆಯಬೇಕಾಗಿದ್ದ ಕುಸ್ತಿ ಪಂದ್ಯ ಹಾಗೂ ಸಂಜೆಯ ರಣ ಕಂಬಾರೋಹಣ ರದ್ದು ಪಡಿಸಲಾಗಿತ್ತು. ಕೆಲವೇ ಜನರು ದೇವರ ದರ್ಶನ ಮಾಡಿ ತೆರಳಿದರು.