ಯಾದಗಿರಿ: ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಒಳಪಂಗಡಗಳ ಸಮುದಾಯದ ಬೇಡಿಕೆಯ ಈಡೇರಿಕೆಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಡಿ. 10ರಂದು ಗಂಗಾವತಿ ತಾಲ್ಲೂಕಿನಲ್ಲಿ ಶ್ರೀ ಕೃಷ್ಣದೇವರಾಯ ವೃತ್ತದ ಬಳಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣಾವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೈಗೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಕಾರ್ಯದರ್ಶಿ ವೆಂಕಟೇಶ ಗುಂಡಾನೋರ ತಿಳಿಸಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ಯ ಈಡಿಗ ಸಮುದಾಯದ ನಿಗಮ ಮಂಡಳಿ ಸ್ಥಾಪನೆ ಮಾಡಲಾಗಿತ್ತು. ಅಧಿಕಾರಕ್ಕೆ ಬಂದ ಈಗಿನ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ. ಈಗ ವಾರ್ಷಿಕ ₹500 ಕೋಟಿ ಅನುದಾನ ಮೀಸಲಿಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದಿನ ಸರ್ಕಾರ ಈಡಿಗ ಸಮುದಾಯದ ಕುಲಶಾಸ್ತ್ರ ಅಧ್ಯಯನಯಕ್ಕಾಗಿ ಘೋಷಿಸಿದ್ದ ₹ 25 ಲಕ್ಷ ಬಳಸಿಕೊಂಡು ಕೂಡಲೇ ಕುಲಶಾಸ್ತ್ರ ಅಧ್ಯಯನ ಮುಗಿಸಿ ಈಡಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಕುಲಕಸುಬಾದ ಸೇಂದಿ ಇಳಿಸುವುದಕ್ಕೆ ಅನುಮತಿ ಕೊಡಬೇಕು. ಕಲಕಸುಬು ಕೆಲಸ ಕಳೆದುಕೊಂಡ ಕುಟುಂಬಗಳಿಗೆ ಮರಳಿ ಕಸುಬು ನೀಡುವುದು, ಇಲ್ಲವಾದಲ್ಲಿ ಕಸುಬು ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಎರಡು ಎಕರೆ ಜಮೀನು ಮಂಜೂರು ಸೇರಿದಂತೆ ಪ್ರಮುಖ 16 ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಈ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದವರು ಹಾಗೂ ಸ್ವಾಮೀಜಿಗಳ ಭಕ್ತರು ಪ್ರತಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದು ಮನವಿ ಮಾಡಿದರು.