ಸುರಪುರ: ‘ಪತ್ರಕರ್ತರಲ್ಲಿ ಬರವಣಿಗೆಯ ಅದ್ಭುತ ಶಕ್ತಿಯಿದೆ. ಪತ್ರಕರ್ತರ ವಿಭಿನ್ನ ಯೋಚನೆಗಳು ಸಮಾಜವನ್ನು ಸರಿದಾರಿಗೆ ತರುವಂತೆ ಮಾಡುತ್ತವೆ. ರಾಜಕಾರಣಿಗಳನ್ನು, ಅಧಿಕಾರಿಗಳನ್ನು ತಿದ್ದುವ, ತೀಡುವ ಶಕ್ತಿ ಪತ್ರಿಕಾರಂಗಕ್ಕೆ ಇದೆ’ ಎಂದು ಶಾಸಕ ರಾಜೂಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಪತ್ರಕರ್ತರು ನಿಜವಾದ ಕೊರೊನಾ ಸೇನಾನಿಗಳು. ಕೋವಿಡ್ ಸಂದರ್ಭದಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರಿಂದಲೇ ಅವುಗಳಿಗೆ ಪರಿಹಾರ ಹುಡುಕಲು ಸಾಧ್ಯವಾಯಿತು. ಕೊರೊನಾ ಇನ್ನೂ ಮುಗಿದಿಲ್ಲ. ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಂಡು ಜೀವ ರಕ್ಷಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ‘ಶಾಸಕ ರಾಜೂಗೌಡ ಅವರ ನೆರವಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಬ್ಯಾಂಕಿಗೆ ₹10 ಕೋಟಿ ಷೇರು ಬಂಡವಾಳ ನೀಡಿದ್ದಾರೆ. ನಬಾರ್ಡ್ ಬ್ಯಾಂಕಿನಿಂದ ಶೀಘ್ರವೇ ₹400 ಕೋಟಿ ಮಂಜೂರಾಗಲಿದೆ. ಯಾದಗಿರಿಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಯತ್ನಿಸುತ್ತೇನೆ’ ಎಂದರು.
ದೇವಪುರದ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಕಾಶ ದೊರೆ ಹಾಗೂಅನಿಲ ದೇಶಪಾಂಡೆ ಅವರಿಗೆ ‘ಪತ್ರಿಕಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊರೊನಾ ಸೇನಾನಿಗಳಾದ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಪೌರಾಯುಕ್ತ ಜೀವನಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ. ನಾಯಕ ಮತ್ತು ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ, ಸಂಘದ ರಾಜ್ಯ ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ, ಜಿಲ್ಲಾ ಘಟಕದ ಅಧ್ಯಕ್ಷ ಇಂದುಧರ ಸಿನ್ನೂರ, ನಿವೃತ್ತ ಎಸ್ಪಿ ಸಿ.ಎನ್. ಭಂಡಾರಿ, ಪುರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ, ಶಂಕರನಾಯಕ, ಪ್ರಕಾಶ ಸಜ್ಜನ್ ಇದ್ದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಯ್ಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶ್ರೀಹರಿರಾವ ಆದವಾನಿ ನಾಡಗೀತೆ ಹಾಡಿದರು. ವಿಜಯಾಚಾರ್ಯ ರಾಜಪುರೋಹಿತ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಗಿರೀಶ ಶಾಬಾದಿ, ರಾಘವೇಂದ್ರ ಜಾಗೀರದಾರ, ವೆಂಕಟಗಿರಿ ದೇಶಪಾಂಡೆ, ಭೀಮಸೇನರಾವ ಕುಲಕರ್ಣಿ, ಗವಿಸಿದ್ದೇಶ ಹೊಗರಿ, ನಾಗರಾಜ ನ್ಯಾಮತಿ, ಶ್ರೀಕರ ಜೋಷಿ, ಕ್ಷೀರಲಿಂಗಯ್ಯ ಬೋನ್ಹಾಳ, ಶ್ರೀನಿವಾಸ ಜಾಲವಾದಿ, ಮಲ್ಲಿಕಾರ್ಜುನ ಸತ್ಯಂ ಪೇಟೆ, ರಾಘವೇಂದ್ರ ಭಕ್ರಿ, ರಾಹುಲ ಹುಲಿಮನಿ, ಭೀಮರಾಯ ಸಿಂಧಗಿರಿ, ರವಿನಾಯಕ ಭೈರಿಮಡ್ಡಿ ಇದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.