ಸುರಪುರ:‘ಚಂಚಲ ಮನಸ್ಸಿಗೆ ನೆಮ್ಮದಿ ನೀಡಿ ಸಂತೋಷದ ಉನ್ಮಾದ ನೀಡುವ ಶಕ್ತಿ ಸಂಗೀತಕ್ಕೆ ಇದೆ. ಸಂಗೀತವನ್ನು ಈಗ ಚಿಕಿತ್ಸೆಯ ರೂಪದಲ್ಲೂ ಬಳಸಲಾಗುತ್ತದೆ’ ಎಂದು ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಹೇಳಿದರು.
ರಂಗಂಪೇಟೆಯ ಬನಶಂಕರಿ ದೇವಸ್ಥಾನದಲ್ಲಿ ಸಗರನಾಡು ಕಲಾ ವೇದಿಕೆ ರುಕ್ಮಾಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೃಷ್ಣ ಸುಬೇದಾರ ಮಾತನಾಡಿ, ‘ಸಂಗೀತ ಆಲಿಸುವುದರಿಂದ ಮನಸ್ಸಿಗೆ ಹಿತ ಎನಿಸುತ್ತದೆ. ಸಂಗೀತ ಕಲಿಯುವ ಮಕ್ಕಳ ಕಲಿಕೆ ಉತ್ತಮವಾಗಿರುತ್ತದೆ’ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ, ಉದ್ಯಮಿ ಸುಗೂರೇಶ ಮಡ್ಡಿ ಮಾತನಾಡಿದರು. ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಶಿವಶರಣಯ್ಯ ಲಿಂಗದಳ್ಳಿ, ಶಿವಲಿಂಗಯ್ಯಸ್ವಾಮಿ ಬಳ್ಳುಂಡಗಿಮಠ, ರಮೇಶ ಕುಲಕರ್ಣಿ, ಮಲ್ಲಪ್ಪ ಹೂಗಾರ ಅವರಿಗೆ ಸಂಗೀತ ಸೇವೆಯಲ್ಲಿ ಸಾಧನೆ ಮಾಡಿದ್ದಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಹರಿರಾವ ಆದವಾನಿ ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷ ರಾಜಶೇಖರ ಗೆಜ್ಜಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಚಟ್ಟಿ ನಿರೂಪಿಸಿದರು. ನಂತರ ಶಿವಶರಣಯ್ಯಸ್ವಾಮಿ ಬಳ್ಳುಂಡಗಿಮಠ ಅವರ ಅಧ್ಯಕ್ಷತೆಯಲ್ಲಿ ಕಲಾವಿದರಿಂದ ಸಂಗೀತೋತ್ಸವ ಜರುಗಿತು.