ಯಾದಗಿರಿ: ಕರ್ನಾಟಕದ ಕನ್ನಡಿಗರು, ಮರಾಠಿಗರು ಯಾವುದೇ ಬೇಡಿಕೆ ಸರ್ಕಾರಕ್ಕೆ ಇಟ್ಟಿರಲಿಲ್ಲ. ಆದರೂ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಘೋಷಿಸಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ ಎಂದು ಕರವೇ ಜಿಲ್ಲಾ ಘಟಕ ಅಧ್ಯಕ್ಷ ಟಿ.ಎನ್.ಭೀಮುನಾಯಕ ಹೇಳಿದರು.
ನಗರದ ಕರವೇ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, ಡಿ.5ರಂದು ಕರವೇ ನೇತೃತ್ವದಲ್ಲಿ ಬಂದ್ಗೆ ಪೂರ್ಣ ಬೆಂಬಲ ನೀಡುತ್ತೇವೆ. ಜಿಲ್ಲೆಯ ಜನತೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಉಳಿದವರು ಬಂಧುಗಳಂತಿರಬೇಕು. ಭಾಷೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಎಂಇಎಸ್, ಶಿವಸೇನೆ, ಎನ್ಸಿಪಿ ಪಕ್ಷಗಳು ಬೆಳಗಾವಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರವೇ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬರಿಷ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಚೌಡಯ್ಯ ಬಾವೂರ, ರವಿಕುಮಾರ ಮಸಳೆ, ಸಿದ್ದಪ್ಪ ಕೂಯಿಲೂರ, ಹಣಮಂತ ತೇಕರಾಳ, ವೆಂಕಟೇಶ ರಾಠೋಡ, ಭೀಮು ಮಲ್ಲಿಬಾವಿ, ಸಿದ್ದು ಕ್ಯಾಸಪನಳ್ಳಿ ಇದ್ದರು.
ಕರವೇ ಜಿಲ್ಲಾ ಉಪಾಧ್ಯಕ್ಷರಾಗಿ ಅಂಬುರಾಜ್ ನಾಯಕ, ಸಾಹೇಬ ಗೌಡ ನಾಯಕರನ್ನು ನೇಮಿಸಲಾಯಿತು.
* ಮತ ರಾಜಕಾರಣಕ್ಕಾಗಿ ಯಡಿಯೂರಪ್ಪ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ರಚಿಸಿ ₹50 ಕೋಟಿ ನೀಡಿರುವುದು ನಮ್ಮ ನಾಡಿಗೆ, ಕನ್ನಡ ಭಾಷೆಗೆ, ಕನ್ನಡಿಗರಿಗೆ ಮಾಡಿರುವ ದ್ರೋಹ - ಟಿ.ಎನ್.ಭೀಮುನಾಯಕ, ಕರವೇ ಜಿಲ್ಲಾ ಘಟಕ ಅಧ್ಯಕ್ಷ