ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Results | ಹುಣಸಗಿ: ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆಗಳು

Published 10 ಮೇ 2024, 5:31 IST
Last Updated 10 ಮೇ 2024, 5:31 IST
ಅಕ್ಷರ ಗಾತ್ರ

ಹುಣಸಗಿ: ಹುಣಸಗಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಬಂದಿದ್ದು, ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆ ಇದ್ದರೂ ಕೂಡಾ ಇಲ್ಲಿನ ಕೆಲ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದು ಹುಣಸಗಿ ಎಂಡಿಆರ್‌ಎಸ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಮೂವರು ಬಡ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿ ಶರಣಬಸವ 625ಕ್ಕೆ 620 ಶೇ 99 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾನೆ. ಕನ್ನಡದಲ್ಲಿ 125ಕ್ಕೆ 125 ಅಂಕ, ಇಂಗ್ಲಿಷ್‌ 99, ಹಿಂದಿ 100, ಗಣಿತ 98, ವಿಜ್ಞಾನ 99, ಹಾಗೂ ಸಮಾಜ 99 ಅಂಕ ಗಳಿಸಿದ್ದಾರೆ.

ಈ ವಿದ್ಯಾರ್ಥಿಯ ತಂದೆ ಗೆದ್ದಲಮರಿ ಗ್ರಾಮದ ಭೀಮಣ್ಣ ಕುರಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ನಾವು ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಮಗ ಚನ್ನಾಗಿ ಓದಬೇಕು ಎಂಬ ಹೆಬ್ಬಯಕೆ ಇತ್ತು. ಇದನ್ನು ಸಾಧಿಸಿದ್ದು, ಅತ್ಯಂತ ತೃಪ್ತಿ ತಂದಿದೆ. ಈಗಾಗಲೆ ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ನಡೆಸುವ ತಪಸ್ ಪರೀಕ್ಷೆ ಪಾಸು ಮಾಡಿ ಪಿಯುಸಿಗೆ ಉಚಿತ ಪ್ರವೇಶ ಪಡೆದಿದ್ದಾನೆ ಎಂದು ಹೇಳಿದರು.

ಇನ್ನು ಇದೇ ಶಾಲೆಯ ವಿದ್ಯಾರ್ಥಿ ಬೈಲಾಪುರ ತಾಂಡಾದ ಸಾಗರ ದೇವರಾಜ 604 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಕೇವಲ ಕೂಲಿ ಕೆಲಸವನ್ನೇ ನೆಚ್ಚಿಕೊಂಡು ನಮ್ಮ ಕುಟುಂಬಸ್ಥರು ಬದುಕು ನಡೆಸುತ್ತಿದ್ದಾರೆ. ಇದು ನನಗೆ ಓದಲು ಪ್ರೇರಣೆಯಾಯಿತು.

‘ನಮ್ಮ ಶಾಲೆಯ ಪ್ರಾಚಾರ್ಯ ಅಶೋಕ ನೀಲಗಾರ ಅವರ ಕಟ್ಟುನಿಟ್ಟಿನ ಕ್ರಮ ಹಾಗೂ ಎಲ್ಲ ಶಿಕ್ಷಕರ ಅವಿತರ ಪ್ರಯತ್ನದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಅಂದು ಹೇಳಿದ ವಿಷಯವನ್ನು ಅಂದೇ ಓದಿದ್ದು, ಬಳಿಕ ಆಯಾ ವಿಷಯದ ಕಿರುಪರೀಕ್ಷೆಗಳಲ್ಲಿ ಹೆಚ್ಚು ಅಂಕ ಬರುವವರೆಗೂ ಬಿಡುತ್ತಿರಲಿಲ್ಲ. ಉತ್ತಮ ಗುರಿಯೊಂದಿಗೆ ತಂದೆಯ ಆಸೆಯಂತೆ ವೈದ್ಯನಾಗುವ ಕನಸು ಇದೆ’ ಎಂದು ಸಾಗರ ದೇವರಾಜ ವಿವರಿಸಿದರು.

ಇದೇ ಶಾಲೆಯ ವಿದ್ಯಾರ್ಥಿಗಳಾದ ದೇವಿಕಾ 600, ಅಂಕ ಪಡೆದು ಸಾಧನೆ ಮಾಡಿದ್ದಾರೆ. ಸಾಧನಾ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದು, ಉಚಿತ ಪ್ರವೇಶ ಲಭ್ಯವಾಗಿದೆ ಎಂದು ಶಾಲೆಯ ಶಿಕ್ಷಕರಾದ ಸಂಗನಗೌಡ ಧನರಡ್ಡಿ ತಿಳಿಸಿದರು.

ಶಾಲೆಯ ಒಟ್ಟು 48 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಪಾಸು ಮಾಡಿದ್ದಾರೆ ಎಂದು ಶಾಲೆಯ ಶಿಕ್ಷಕರು ತಿಳಿಸಿದರು.

ಸಾಗರ್
ಸಾಗರ್
ದೇವಿಕಾ
ದೇವಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT