ಕೊಡೇಕಲ್ಲ (ಹುಣಸಗಿ): ಇಲ್ಲಿನ ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಜಾತ್ರೆ ಶುಕ್ರವಾರ ಹಾಗೂ ಶನಿವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಶುಕ್ರವಾರ ರಾತ್ರಿ ಹುಣ್ಣಿಮೆ ದಿನ ಮಹಲಿನ ಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ಜೋಡು ಪಲ್ಲಕ್ಕಿಗಳಿಗೆ ಕಳಸಾರೋಹಣ, ಅಷ್ಟ ವಿಧಾರ್ವನೆ ಪೂಜೆ ಜರುಗಿತು. ನಂತರ ಕಲಾತಂಡಗಳಿಂದ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.
ಶನಿವಾರ ಬೆಳಿಗ್ಗೆ ಗ್ರಾಮದ ಗುಡಿಯ ಮುಂದೆ ಅಲಂಕರಿಸಿ ಕೂರಿಸಿದ್ದ ಜೋಡು ಪಲ್ಲಕ್ಕಿಗಳಿಗೆ ವೃಷಬೇಂದ್ರ ಅಪ್ಪ ಹಾಗೂ ಗ್ರಾಮದ ಬಾರಾ ಬಲೂತಿ ವತನದಾರರು ಪೂಜಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಜೋಡು ಪಲ್ಲಕ್ಕಿಗಳಿಗೆ ದಾರಿಯುದ್ದಕ್ಕೂ ಭಕ್ತರು ಶ್ರದ್ಧಾ ಭಕ್ತಿಯಿಂದ ನಮಸ್ಕರಿಸಿ ಹೂ, ಉತ್ತತ್ತಿ, ಬಾಳೆಹಣ್ಣು ಎರಚಿ ಭಕ್ತಿ ಸಮರ್ಪಿಸಿದರು.
‘ಕೋವಿಡ್ ಕಾರಣದಿಂದಾಗಿ ಎರಡು ಬಾರಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪಾಲ್ಗೊಂಡಿರುವದು ಖುಷಿ ತಂದಿದೆ’ ಎಂದು ಹೊಕ್ರಾಣಿ ಭಕ್ತರಾದ ಸಂಗಮೇಶ ಹಾಗೂ ಸಂಗಪ್ಪ ಕಗ್ಗೋಡ ತಿಳಿಸಿದರು.
‘6 ವರ್ಷಗಳಿಂದಲೂ ಪಾದಯಾತ್ರೆ ಮೂಲಕ ಕೊಡೇಕಲ್ಲ ಜಾತ್ರೆಗೆ ಆಗಮಿಸುತ್ತಿದ್ದೇವೆ. ಆದರೆ ಕೋವಿಡ್ ಸಂದರ್ಭದಲ್ಲಿ ಜಾತ್ರೆಗೆ ಅವಕಾಶವಿಲ್ಲದ ಕಾರಣ ಬೇಸರವಾಗಿತ್ತು. ಈ ಬಾರಿ ದೇವರ ದರ್ಶನ ಹಾಗೂ ಪಲ್ಲಕ್ಕಿ ಸೇವೆಯಲ್ಲಿ ಪಾಲ್ಗೊಂಡಿದ್ದರಿಂದಾಗಿ ಸಂತಸವಾಗಿದೆ’ ಎಂದು ದೇವರಹಿಪ್ಪರಗಿ ಬಳಿಯ ದೇವೂರ ಗ್ರಾಮದ ರಮೇಶ ಜೋಗೂರ ಹಾಗೂ ಮಲ್ಲಿಕಾರ್ಜುನ ಜೋಗೂರ ತಿಳಿಸಿದರು.
ಹುಣಸಗಿ, ವಿಜಯಪುರ, ಆಹೇರಿ, ಹೊಕ್ರಾಣಿ, ನಂದ್ಯಾಳ, ನಾಲತವಾಡ, ಮುದ್ದೇಬಿಹಾಳ, ಸುರಪುರ, ದ್ಯಾಮನಹಾಳ ಪಟ್ಟಣ ಜತೆಗೆ ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಕೊಡೇಕಲ್ಲ ಪೊಲೀಸ್ ಠಾಣೆಯ ಪಿಎಸ್ಐ ಅಧಿಕಾರಿಗಳಾದ ಬಾಶುಮೀಯ ಕೊಂಚೂರು, ಕೃಷ್ಣಮೂರ್ತಿ ಪುರೋಹಿತ್, ಸಿದ್ದೇಶ್ವರ ಗರಡೆ ನೇತೃತ್ವದಲ್ಲಿ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.