ಸುರಪುರ: ‘ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರ ಕೊಡುಗೆ ಅನನ್ಯವಾಗಿದೆ’ ಎಂದು ವಕೀಲ ನಿಂಗಣ್ಣ ಚಿಂಚೋಡಿ ಹೇಳಿದರು.
ನಗರದ ವಕೀಲರ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಹುತೇಕರು ವಕೀಲರೇ ಆಗಿದ್ದರು. ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು, ಸರ್ದಾರ ವಲ್ಲಭಭಾಯಿ ಪಟೇಲ್ ಅವರಂಥ ದಿಗ್ಗಜರು ವಕೀಲಿ ವೃತ್ತಿ ಮಾಡಿದವರು. ಹೀಗಾಗಿ ವಕೀಲರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವಿದೆ’ ಎಂದರು.
ವಕೀಲ ದೇವೀಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ‘ವಕೀಲರಾಗಿದ್ದ ಪ್ರಥಮ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದ ಅವರ ಸವಿನೆನಪಲ್ಲಿ ವಕೀಲರ ದಿನಾಚರಣೆ ಆಚರಿಸಲಾಗುತ್ತಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ವಕೀಲರ ಕೊಡುಗೆ ಮಹತ್ತರವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ ಮಾತನಾಡಿ, ‘ಇಂದಿನ ವಕೀಲರು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ವಕೀಲರ ಮಾರ್ಗದಲ್ಲಿ ನಡೆಯಬೇಕು. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಕೀಲಿ ವೃತ್ತಿಗೆ ಘನತೆ ತರಬೇಕು’ ಎಂದು ಕರೆ ನೀಡಿದರು.
ಬಸವಲಿಂಗಪ್ಪ ಪಾಟೀಲ, ಜಿ.ಎಸ್. ಪಾಟೀಲ, ಉದಯಸಿಂಗ್, ಮಹ್ಮದ್ ಹುಸೇನ್, ರಮಾನಂದ ಕವಲಿ, ಜಿ.ಆರ್. ಬನ್ನಾಳ, ಅಶೋಕ ಕವಲಿ, ಶ್ರೀದೇವಿ ಪಾಟೀಲ, ಭೀಮಣ್ಣ ಹೊಸಮನಿ, ಎಸ್. ಸಿದ್ರಾಮಪ್ಪ, ಸುರೇಂದ್ರ ದೊಡ್ಡಮನಿ, ಆದಪ್ಪ ಹೊಸಮನಿ, ಪ್ರಕಾಶ ಕವಲಿ, ಸುಭಾಷ ಬಿರಾದಾರ ಇದ್ದರು.
ಸಂಘದ ಕಾರ್ಯದರ್ಶಿ ಗೋಪಾಲ ತಳವಾರ ನಿರೂಪಿಸಿದರು. ಸಂತೋಷ ಗಾರಂಪಳ್ಳಿ ವಂದಿಸಿದರು.