ಸುರಪುರ: ‘ಇಲ್ಲಿಯ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ 423 ಪ್ರಕರಣಗಳ ಪೈಕಿ 215 ಪ್ರಕರಣನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ತಯ್ಯಬಾ ಸುಲ್ತಾನ ತಿಳಿಸಿದರು.
ಶನಿವಾರ ಹಮ್ಮಿಕೊಂಡಿದ್ದ ಲೋಕ್ ಅದಾಲತ್ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಮೋಟಾರು ಅಪಘಾತ ಪ್ರಕರಣದಿಂದ ₹13.70 ಲಕ್ಷ, ಚೆಕ್ ಬೌನ್ಸ್ ಪ್ರಕರಣದಿಂದ ₹2 ಲಕ್ಷ, ಇಪಿ ಪ್ರಕರಣಗಳಲ್ಲಿ ₹1.21 ಲಕ್ಷ, ಲಘು ಪ್ರಕರಣದಿಂದ 17.2 ಲಕ್ಷ ವಸೂಲಿ ಮಾಡಿ ಕಕ್ಷಿದಾರರಿಗೆ ಭರಿಸಿಕೊಡಲಾಗಿದೆ’ ಎಂದು ಅವರು ತಿಳಿಸಿದರು.
‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನ್ಯಾಯಾಲಯದಲ್ಲಿ ಪ್ರತಿ ತಿಂಗಳು ಎರಡನೆ ಶನಿವಾರ ಅದಾಲತ್ ಏರ್ಪಡಿಸಲಾಗುತ್ತಿದೆ. ಸಣ್ಣ ಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಕಕ್ಷಿದಾರರಿಗೆ ಇದೊಂದು ಒಳ್ಳೆ ಅವಕಾಶವಾಗಿದೆ. ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದರು.