ಕಕ್ಕೇರಾ (ಯಾದಗಿರಿ ಜಿಲ್ಲೆ): ಪಟ್ಟಣ ಸಮೀಪದ ಗುಲಗಟ್ಟಿ ಗ್ರಾಮದ ಬಸವರಾಜ ದುರಗಪ್ಪ ಮಕಾಶಿ ಕಕ್ಕೇರಾ (28) ಹಾವು ಕಡಿದು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.
ಬಸವರಾಜ ಮಕಾಶಿ ಪ್ರಸ್ತುತ ಹುಣಸಗಿ ತಾಲ್ಲೂಕಿನ ಗುಳಬಾಳದಲ್ಲಿ ಪತ್ನಿ ಊರಲ್ಲಿ ವಾಸವಿದ್ದರು. ಶನಿವಾರ (ಮಾ.23) ರಂದು ಸಂಜೆ 6.30ಕ್ಕೆ ಜಾನುವಾರುಗಳಿಗೆ ಮೇವು ತರಲು ಹೋದಾಗ ಹಾವು ಕಚ್ಚಿದೆ. ಶೀಘ್ರವೇ ಸಮೀಪದ ಹುಣಸಗಿ ಆರೋಗ್ಯ ಕೇಂದ್ರಕ್ಕೆ ಆಗಮಿಸಿದಾಗ, ಸಿಬ್ಬಂದಿ ಗ್ಲುಕೋಸ್ ಹಚ್ಚಿದರು.
ನಂತರ ಹಟ್ಟಿಯಲ್ಲಿ ಇದಕ್ಕೆ ಔಷಧಿ ಇದೆ ಹೋಗಿ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದರು. ಸರಿಯಾದ ಸಮಯದಲ್ಲಿ ವೈದ್ಯಾಧಿಕಾರಿ ಇರಲಿಲ್ಲ. ಹೀಗಾಗಿ ಎರಡು ಗಂಟೆಯಾದರೂ ಅಂಬುಲೆನ್ಸ್ ಸಿಬ್ಬಂದಿ ಬಾರದ ಪ್ರಯುಕ್ತ ಜೀವ ಹೋಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.
'ನನ್ನ ಮಗನ ಜೀವ ಹೋಗಲು ವೈದ್ಯರು, ಅಂಬುಲೆನ್ಸ್ ಸಿಬ್ಬಂದಿ' ಕಾರಣ ಎಂದು ತಂದೆ ದುರಗಪ್ಪ ಮಕಾಶಿ ಆರೋಪಿಸಿದ್ದಾರೆ.
ವೈದ್ಯಾಧಿಕಾರಿ ಡಾ.ಎಸ್.ಬಿ. ಪಾಟೀಲ, ಅಂಬುಲೆನ್ಸ್ ವಾಹನ ಚಾಲಕರ ನಿರ್ಲಕ್ಷ್ಯದಿಂದ ಜೀವ ಹೋಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕೆಂದು ರೈತ ಸಂಘ, ಎಸ್ಸಿ, ಎಸ್ಟಿ ಒಕ್ಕೂಟ ನಿರ್ದೇಶಕ ದೇವಿಂದ್ರಪ್ಪ ಬಳಿಚಕ್ರ, ದಲಿತ ಸಂಘಟನೆ, ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.