ಶಹಾಪುರ: ಭಾರತೀಯ ಜೀವ ವಿಮಾ ನಿಗಮವನ್ನು(ಎಲ್ಐಸಿ) ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಿ ಪಾಲಿಸಿದಾರ ಹಾಗೂ ಸಾರ್ವಜನಿಕರ ಮತ್ತು ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಹಿತ ಕಾಪಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಎಲ್ಐಸಿ ಶಹಾಪುರ ಶಾಖೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಶಾಖೆಯು 1956ದಿಂದ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ವಿಶ್ವಾಸಕ್ಕೆ ಪಾತ್ರವಾಗಿದೆ. ₹4 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಸಾರ್ವಜನಿಕ ಹಣವನ್ನು ಸಾರ್ವಜನಿಕರ ಕಲ್ಯಾಣಕ್ಕೆ ಹಾಗೂ ಭದ್ರತೆಗಾಗಿ ಬಳಸುತ್ತಿದೆ. ಇದರಲ್ಲಿ ಲಕ್ಷಾಂತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕಷ್ಟು ಆದಾಯವನ್ನು ಹೊಂದಿದ್ದರು ಕೂಡ ಅನವಶ್ಯಕವಾಗಿ ವಿಮಾ ನಿಗಮವನ್ನು ಖಾಸಗಿಕರಣಗೊಳಿಸುವುದು ನಿಲ್ಲಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಶಹಾಪುರ ಶಾಖೆಯ ವಿಮಾ ನೌಕರ ಸಂಘದ ಅಧ್ಯಕ್ಷ ಭೀಮರಾಯ ಜಿ., ಕಾರ್ಯದರ್ಶಿಗಳಾದ ಸಂತೋಷಕುಮಾರ ಜಮದಾರ, ಮಾನಪ್ಪ ಬಿಲ್ಲವ್ ಹಸನಾಪುರ, ಸೋಮಣ್ಣ, ಈರಣ್ಣ ಕಾರ್ಮಿಕ ಸಂಘಟನೆಯ ಮುಖಂಡರಾದ ಎಸ್.ಎಂ.ಸಾಗರ, ಚೆನ್ನಪ್ಪ ಆನೇಗುಂದಿ, ಶಿವಣ್ಣ ಹೊಸ್ಮನಿ, ವಿಜಯಕುಮಾರ ಗಿಂಡಿ, ಗುರುಶಾಂತ, ಚಂದ್ರಶೇಖರ ದೇಸಾಯಿ ಇದ್ದರು.