ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೊಗರಿ ಮಂಡಳಿ: ಮರಿಗೌಡಗೆ ಮೂರನೇ ಬಾರಿ ಅಧ್ಯಕ್ಷ ಸ್ಥಾನ

Published 1 ಮಾರ್ಚ್ 2024, 5:28 IST
Last Updated 1 ಮಾರ್ಚ್ 2024, 5:28 IST
ಅಕ್ಷರ ಗಾತ್ರ

ಶಹಾಪುರ: ತೊಗರಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಶಹಾಪುರದ ಮರಿಗೌಡ ಹುಲಕಲ್ ಅವರು ಗಿಟ್ಟಿಸಿಕೊಂಡಿದ್ದಾರೆ. ನಿಗಮ ಮಂಡಳಿಯ ಕೋಟಾದ ಅಡಿಯಲ್ಲಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಪಕ್ಷದ ಮುಖಂಡರು ಆಗಿದ್ದಾರೆ. ಹಿಂದೆ ಎರಡು ಬಾರಿ ಬೇರೆ ಬೇರೆ ನಿಗಮ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಿದ್ದರು. ಈಗ ಮೂರನೇ ಬಾರಿಯಾಗಿ ನೇಮಕಗೊಂಡಿರುವುದು ವಿಶೇಷ.

ತಾಲ್ಲೂಕಿನ ಹುಲಕಲ್ ಗ್ರಾಮದ ನಿವಾಸಿ ಮರಿಗೌಡ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದವರು. 63 ವರ್ಷದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿಈ ಬಾರಿ ಸಾಕಷ್ಟು ಪ್ರತಿರೋಧದ ನಡುವೆ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನುತ್ತಾರೆ ಮರಿಗೌಡ ಹುಲಕಲ್ ಅವರ ಆಪ್ತವಲಯದ ಕೂಟ.

ಮರಿಗೌಡ ಅವರು 1997ರಲ್ಲಿ ಅಂದಿನ ಜನತಾದಳದ ಅಧಿಕಾರಾವಧಿಯಲ್ಲಿ ಉಣ್ಣೆ ಮತ್ತು ಕುರಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ 2014ರಲ್ಲಿ ಕೃಷ್ಣಾ ಕಾಡಾ ಅಧ್ಯಕ್ಷರಾಗಿ ನೇಮಕವಾಗಿದ್ದರು.  ಅಲ್ಲದೆ 2010ರಿಂದ 2022ರ ವರೆಗೆ 12 ವರ್ಷ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷದಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಜೀವನವನ್ನು ಮುಡಿಪಾಗಿಟ್ಟಿದ್ದೇವೆ. ಹೈಕಮಾಂಡ್‌ ನಮಗೆ ಕೃಪೆ ತೋರಲಿಲ್ಲ.ಮರಿಗೌಡ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದಕ್ಕೆ ಬೇಸರವಿಲ್ಲ. ಆದರೆ ಹಿಂದುಳಿದ ಕಬ್ಬಲಿಗ, ಮುಸ್ಲಿಂ, ಉಪ್ಪಾರ, ಪರಿಶಿಷ್ಟ ಪಂಗಡದ ವಾಲ್ಮೀಕಿ, ಪರಿಶಿಷ್ಟ ಜಾತಿಯ ಮುಖಂಡರಿಗೆ ಅವಕಾಶ ನೀಡದೆ ಇರುವುದು ನೋವುಂಟು ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರು ಬೇಸರ ಹೊರ ಹಾಕಿದರು. ಕಾಂಗ್ರೆಸ್ ಪಕ್ಷವು ಶೋಷಿತರು ಕಾಂಗ್ರೆಸ್ ಪಕ್ಷದ ಶಕ್ತಿ ಎನ್ನುತ್ತಲ್ಲೇ ನಿರಂತರವಾಗಿ ಜಿಲ್ಲೆಯಲ್ಲಿ ಹಿಂದುಳಿದ ಸಮುದಾಯವನ್ನು ನಿರ್ಲಕ್ಷ್ಯವಹಿಸುತ್ತಾ ಬಂದಿದೆ. ಜಿಲ್ಲೆಯ ಶಾಸಕರು ಹಾಗೂ ಸಚಿವರು ಯಾಕೆ ಮೌನವಹಿಸಿದ್ದಾರೆ ಎಂಬುದು ನಿಗೂಢವಾಗಿದೆ ಎಂದು ಹಿಂದುಳಿದ ವರ್ಗಗಳ ಕಾಂಗ್ರೆಸ್ ಪಕ್ಷದ ನಾಯಕರು ಆಕ್ರೋಶ ಹೊರ ಹಾಕಿದರು.

‘ಮುಸ್ಲಿಂ ಸಮುದಾಯ ಕಡೆಗಣನೆ’

ಶಹಾಪುರ: ಯಾದಗಿರಿ ಜಿಲ್ಲೆಯಲ್ಲಿ ಸಾಕಷ್ಟು ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ಪಕ್ಷದ ಕಟ್ಟಾ ಹಾಗೂ ನಿಷ್ಠಾವಂತ ಕಾರ್ಯಕರ್ತರು ಇದ್ದೇವೆ.ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಹಿಂದುಳಿದ ಸಮುದಾಯ ಕೋಟಾ ಕುರುಬ ಸಮುದಾಯದ ಒಬ್ಬ ವ್ಯಕ್ತಿಯ ಸುತ್ತ ಗಿರಕಿ ಹೊಡೆಯುತ್ತಿರುವುದು ಯಾವ ನ್ಯಾಯ?. ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದೆ ಎಂಬ ಕೊರಗು ನಿಷ್ಠಾವಂತ ಕಾರ್ಯಕರ್ತರಿಗೆ ಕಾಡುತ್ತಲಿದೆ ಎಂದು ಮುಸ್ಲಿಂ ಸಮುದಾಯ ಮುಖಂಡ ಖಾಜಾ ಮೈನುದ್ದೀನ ಜಮಶೇರಿ ನಾಯ್ಕಲ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಹಲವು ವರ್ಷದಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವೆ. ತೊಗರಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಹೈಕಮಾಂಡ್‌ಗೆ ಧನ್ಯವಾದ ಹೇಳುವೆ.
ಮರಿಗೌಡ ಹುಲಕಲ್ ತೊಗರಿ ಮಂಡಳಿ ನೂತನ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT