ಕಕ್ಕೇರಾ: ಹಿಂದೂ–ಮುಸ್ಲಿಂ ಭಾವೈಕ್ಯದ ತಿಂಥಣಿಯ ಮೌನೇಶ್ವರ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಮಧ್ಯೆ ಅದ್ದೂರಿಯಾಗಿ ನೆರವೇರಿತು.
ಎಕ್ ಲಾಕ್ ಐಸಿ ಹಜಾರ್ ಪಾಚೋಪೀರ್ ಪೈಗಂಬರ್, ಜೀತ್ ಪೈಗಂಬರ್ ಮೌನೋದ್ದೀನ್, ಕಾಶೀಪತಿ ಗಂಗಾಧರ ಹರಹರ ಮಹಾದೇವ...ಎಂಬ ಮಂತ್ರಘೋಷಗಳು ಮೊಳಗಿದವು.
ಭಾವೈಕ್ಯದ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಸಂಕೇತದ ಧ್ವಜಗಳನ್ನು ಹೊತ್ತ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿಯ ಪರಾಕಾಷ್ಠೆ ಮೆರೆದರು. ಬೆಟ್ಟ-ಗುಡ್ಡಗಳ ಮೇಲೆ ನಿಂತು ದೂರದಿಂದಲೇ ರಥೋತ್ಸವವನ್ನು ಕಣ್ಣು ತುಂಬಿಕೊಂಡ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ರಥವು ಸುಗಮವಾಗಿ ಪಾದಗಟ್ಟಿ ತಲುಪಿ ಸ್ವಸ್ಥಳಕ್ಕೆ ಬಂದು ತಲುಪಿತು. ರಥೋತ್ಸವ ನಂತರ ಸಂಜೆ ಪಲ್ಲಕ್ಕಿ ಮಹಾಸೇವೆ ವಿಜೃಂಭಣೆಯಿಂದ ಜರುಗಿತು.
ಸುರಪುರ ಅರಸು ಸಂಸ್ಥಾನದ ಕೃಷ್ಣಪ್ಪನಾಯಕ, ದೇವಸ್ಥಾನದ ಮೌನೇಶ್ವರ ಸ್ವಾಮೀಜಿ, ತಹಶೀಲ್ದಾರ್ ಕೆ. ವಿಜಯಕುಮಾರ್, ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ತಿಂಥಣಿ ಗ್ರಾ.ಪಂ.ಅಧ್ಯಕ್ಷ ಹಣಮಂತ ದೊಡ್ಮನಿ, ಭೀಮಣ್ಣ ಹವಾಲ್ದಾರ್, ಚಿನ್ನಪ್ಪ ಗುಡಗುಂಟಿ, ಭೈರಣ್ಣ ಅಂಬಿಗೇರ, ಬಸವರಾಜ ದೊಡ್ಮನಿ, ಮಾನಯ್ಯಗೌಡ ದಳಪತಿ, ಭೀಮಣ್ಣ ಕವಲ್ದಾರ್, ದೇವಿಂದ್ರಪ್ಪ ಅಂಬಿಗೇರ, ತಿಪ್ಪಣ್ಣ ಕುರ್ಲಿ, ಸಂಜೀವನಾಯಕ ಕವಲ್ದಾರ, ಗಂಗಾಧರನಾಯಕ, ದೇವಿಂದ್ರಪ್ಪ, ಮೌನೇಶ ಬೋವಿ, ಫಕ್ರುದ್ಧೀನ್, ಪ್ರವೀಣಕುಮಾರ, ಬಸವರಾಜ ಶೆಟ್ಟಿ, ಅಲ್ಲಾಭಕ್ಷ, ಮದನಸಾಬ ಸೇರಿ ದೇವಾಲಯದ ಮೇಲ್ವಿಚಾರಕ ಹಾಜರಿದ್ದರು. ದೇವಸ್ಥಾನ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲಾ ವರಿಷ್ಠಾಧಿಕಾರಿ ಸಂಗೀತಾ, ಡಿವೈಎಸ್ಪಿ ಜಾವೀದ್ ಇನಾಂದಾರ್ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು. ನದಿತೀರ ಹಾಗೂ ದೇವಸ್ಥಾನದ ಹೊರ ಮತ್ತು ಒಳಗೆ ಸೇರಿದಂತೆ ಪ್ರಮುಖ ಆಯಾಕಟ್ಟಿನ ಸ್ಥಳಗಳಲ್ಲಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಗುರುವಾರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಕಕ್ಕೇರಾ ಪಟ್ಟಣದ ಸೋಮನಾಥ ಸಂಗೀತ ಪಾಠಶಾಲೆ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿದವು.
ಇಂದು ಧೂಳಗಾಯಿ, ಗುಹಾಪ್ರವೇಶ: ಶನಿವಾರ (ಫೆ.24) ಬೆಳಿಗ್ಗೆಯಿಂದ ಸಂಜೆವರೆಗೆ ಭಕ್ತರಿಂದ ಧೂಳಗಾಯಿ ಸಮರ್ಪಣೆ ನಡೆಯಲಿದೆ. ನಂತರ ಸಂಜೆ ಮೌನೇಶ್ವರರು ಗುಹಾಪ್ರವೇಶಗೊಳ್ಳುವ ಮೂಲಕ ಜಾತ್ರೆ ಸಂಪನ್ನವಾಗಲಿದೆ.
ಧೂಳಗಾಯಿ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.