ಯರಗೋಳ: ಮುಂಗಾರು ಮಳೆಯು ನಿಗದಿತ ಅವಧಿಯ ಮೊದಲೆ ಆಗಮಿಸಿರುವುದರಿಂದ ಹತ್ತಿಕುಣಿ ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ರೈತರು ಉತ್ಸಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಸಾಲಿನಲ್ಲಿ ಅತಿವೃಷ್ಟಿ ಪರಿಣಾಮ, ಹೆಸರು, ತೊಗರಿ, ಹತ್ತಿ ಬೆಳೆಗಳು ಕೊಳೆತು ಭೂಮಿಯ ಪಾಲಾಗಿ, ಭತ್ತ ನೆಲ ಕಚ್ಚಿತ್ತು. ರೈತರು ಕಣ್ಣೀರು ಸುರಿಸುವಂತಾಗಿತ್ತು.
ಈ ವರ್ಷ ಮಿರಗ (ಮೃಗಶಿರ) ಮಳೆಗಿಂತ ಮೊದಲೆ ಮಳೆ ಸುರಿದ ಪರಿಣಾಮ, ಹಲವು ಹಳ್ಳಿಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಹತ್ತಿಕುಣಿ, ಯರಗೋಳ ಸರ್ಕಾರಿ ಕೃಷಿ ಕೇಂದ್ರಗಳಲ್ಲಿ ಇಲ್ಲಿಯವರೆಗೆ 30 ಕ್ವಿಂಟಲ್ ಹೆಸರು ಬಿತ್ತನೆ ಬೀಜ ಮಾರಾಟವಾಗಿದೆ ಎಂದು 'ಪ್ರಜಾವಾಣಿ' ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ, ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ 2 ಸಾವಿರ ಎಕರೆ ಬಿತ್ತನೆಯಾಗಿದ್ದು, ಒಟ್ಟು 6 ಸಾವಿರ ಎಕರೆ ಬಿತ್ತನೆಯ ಗುರಿ ಇದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೀಜಗಳು ಬಿತ್ತನೆ ಮಾಡಿದ್ದಾರೆ ಎಂದರು.
ರಾಜ್ಯ ಸರ್ಕಾರ ಕೋವಿಡ್ ನಿಯಮಾವಳಿಗಳಲ್ಲಿ ಕೃಷಿ ಚಟುವಟಿಕೆಗೆ ಸಡಿಲಿಕೆ ನೀಡಿರುವುದರಿಂದ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೆ, ಇನ್ನಿತರ ಕೃಷಿ ಸಂಬಂಧಿಸಿದ ಚಟುವಟಿಕೆಗೆ ತೊಂದರೆಯಾಗಿಲ್ಲ.