ಹುಣಸಗಿ: ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನವೇ ಭದ್ರ ಬುನಾದಿಯಾಗಿದ್ದು, ಪ್ರತಿಯೊಬ್ಬರ ದೇಶ ಪ್ರೇಮ ಮತದಾನದಲ್ಲಿ ಅಡಗಿದೆ ಎಂದು ಹುಣಸಗಿ ಗ್ರೇಡ್– 2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಇರುವ ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದರು.
ಈ ವೇಳೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದವರಿಗೆ ನೂತನ ಗುರುತಿನ ಚೀಟಿ ನೀಡಲಾಯಿತು.
ಉಪ ತಹಶೀಲ್ದಾರ್ ಪ್ರವೀಣ ಸಜ್ಜನ್, ಪ್ರಕಾಶ ಪಾಟೀಲ, ಹಸನ್ ಸಾಬ್, ಮಹಾಂತೇಶ, ವೆಂಕಟೇಶ, ಸುಮಂಗಲಾ ಪಾಟೀಲ ಇದ್ದರು.
ಪ್ರತಿಜ್ಞಾವಿಧಿ ಬೋಧನೆ: ಕೊಡೇಕಲ್ಲ ಗ್ರಾಮದ ಜನಕ ಪದವಿ ಕಾಲೇಜಿನಲ್ಲಿ ಎಸ್ಎಸ್ಎಸ್ ಸಹಯೋಗದಲ್ಲಿ ಮತದಾರರ ದಿನಾಚರಣೆ ಆಚರಿಸಲಾಯಿತು.
ಪ್ರಾಚಾರ್ಯ ಸೋಮಶೇಖರ ಪಂಚಗಲ್ಲ ಮಾತನಾಡಿ, ಪ್ರತಿಯೊಬ್ಬ ಪ್ರಜೆಯು ತನಗೆ ಸೂಕ್ತವಾದ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಬಳಿಕ ಉಪನ್ಯಾಸಕ ನಾಗರಾಜ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.