ಯಾದಗಿರಿ: ಇಲ್ಲಿನ ಸೈದಾಪುರದಿಂದ ಕಣೇಕಲ್ ಗ್ರಾಮದವರೆಗೆ ಹೊಸದಾಗಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ (ಪಿಎಂಜಿಎಸ್ವೈ) ಯೋಜನೆಯಡಿ ರಸ್ತೆ ನಿರ್ಮಾಣ ಮಾಡುತ್ತಿದ್ದು, ಬಿತ್ತನೆ ಮಾಡಿದ ಜಮೀನುಗಳಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರು, ಈಗಾಗಲೇ ಜಮೀನಿನಲ್ಲಿ ಹತ್ತಿ, ತೊಗರಿ, ಶೇಂಗಾ, ಜೋಳ ಬೆಳೆಗಳು ಇವೆ. ಸಣ್ಣ ಹಿಡುವಳಿದಾರರ ಭೂಮಿಗಳಿವೆ. ಇದ್ದ ಸ್ವಲ್ಪ ಭೂಮಿ ರಸ್ತೆಗೆಂದು ಹೋದಾಗ ನಮ್ಮ ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟಕರವಾಗಿರುತ್ತದೆ ಎಂದು ಒತ್ತಾಯಿಸಿದರು.
ಈ ಮಾರ್ಗದಲ್ಲಿ ಪರಿಶಿಷ್ಟ ಜಾತಿಯ ಜಮೀನುಗಳು ಬರುತ್ತಿದ್ದು, ರೈತರಿಗೆ ತಿಳಿಸದೇ ನಮ್ಮ-ನಮ್ಮ ಹೆಸರಿನಲ್ಲಿರುವ ಪಟ್ಟಾ ಜಮೀನುಗಳಲ್ಲಿ ರಸ್ತೆ ಇಲ್ಲದಿದ್ದರೂ ರೈತರ ಮೇಲೆ ದೌರ್ಜನ್ಯ ಮಾಡಿ ಗುತ್ತಿಗೆದಾರರು ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತರಿಗೆ ಮಾಹಿತಿ ನೀಡದೇ ಜೆಸಿಬಿ ಯಂತ್ರಗಳನ್ನು ಬಳಸಿ ಬೆಳೆಗಳನ್ನು ನಾಶಪಡಿಸಿದ್ದಾರೆ. ಬೆಳೆಯನ್ನು ನಂಬಿ ಜೀವನ ಸಾಗಿಸುತ್ತಿರುವ ರೈತರಿಗೆ ಬೆಳೆ ನಷ್ಟ ಭರಿಸಿಕೊಡಬೇಕು. ಅನಧಿಕೃತವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಈ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕೆ ನಮ್ಮದು ತಕರಾರು ಇದೆ. ರೈತರು ಸಹನೆ ಕಳೆದುಕೊಳ್ಳುವ ಮುಂಚೆಯೇ ಅವರಿಗೆ ರಸ್ತೆ ನಿರ್ಮಾಣ ಮಾಡಲು ಪ್ರಯತ್ನಪಟ್ಟಲ್ಲಿ ಸಂಘ-ಸಂಸ್ಥೆಗಳೊಂದಿಗೆ ರಸ್ತೆ ತಡೆ ಮಾಡಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.