ಸುರಪುರ: ‘ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ದಲಿತ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಜ. 10 ರಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಪರಿಶಿಷ್ಟ ಮುಖಂಡ ನಾಗಣ್ಣ ಕಲ್ಲದೇವನಳ್ಳಿ ಅವರು ತಿಳಿಸಿದರು.
ನಗರದ ಬುದ್ದ ವಿಹಾರದಲ್ಲಿ ಶುಕ್ರವಾರ ನಡೆದ ದಲಿತ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿ, ‘ಕೆಲ ಜನಾಂಗದವರಿಗೆ ಕಂದಾಯ ಇಲಾಖೆಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡುತ್ತಿರುವ ಕೆಲಸ ತೆರೆಮರೆಯಲ್ಲಿ ನಡೆದಿದೆ. ಇದನ್ನು ಖಂಡಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ರಾಹುಲ್ ಹುಲಿಮನಿ, ವೆಂಕೋಬ ದೊರೆ, ದೇವಿಂದ್ರಪ್ಪ ಪತ್ತಾರ, ವೆಂಕಟೇಶ ಬೇಟೆಗಾರ ಹಾಗೂ ನಿಂಗಣ್ಣ ಗೋನಾಲ ಸಲಹೆ ನೀಡಿದರು.