ವಡಗೇರಾ: ಅನಾಥ ಶವಕ್ಕೆ ಮಗಳಾಗಿ ನಿಂತು ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಜೈಶ್ರೀ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಖಾನಾಪುರ ಗ್ರಾಮದ ರಾಮಲಿಂಗೇಶ್ವರ ಮಠಕ್ಕೆ ಕಳೆದ 7- 8 ದಿನಗಳ ಹಿಂದೆ ಬಂದಿದ್ದ ಅಂದಾಜು 70 ರಿಂದ 75ವಯಸ್ಸಿನ ಅಪರಿಚಿತ ಸಾಧುವೊಬ್ಬರು ಮಾರ್ಚ್ 7 ರಂದು ಸಂಜೆ 5.30 ಸುಮಾರಿಗೆ ವಯೋಸಹಜ ಕಾಯಿಲೆಯಿಂದ ಅಥವಾ ಹಸಿವಿನಿಂದ ಮೃತಪಟ್ಟಿರಬಹುದು ಎಂದು ಮಾರ್ಚ್ 8 ರಂದು ನಾಗಪ್ಪ ದೇವೇಂದ್ರಪ್ಪ ರಂಗಾಯನೂರ ಖಾನಾಪುರ ಅವರು ವಡಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ತಕ್ಷಣ ವಡಗೇರಾ ಪಿಎಸ್ಐ ಜೈಶ್ರೀ ಅವರು ಘಟನಾ ಸ್ಥಳಕ್ಕೆ ಭೇಟಿನೀಡಿ ಮೃತ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದಾರೆ. ಮೃತ ಸ್ವಾಮೀಜಿ ಅನಾಥ ಹಾಗೂ ಕುಟುಂಬಸ್ಥರು ಯಾರು ಇಲ್ಲ ಎಂದು ತಿಳಿದು ಬಂದಾಗ ಅನಾಥ ಸ್ವಾಮೀಜಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಾವೇ ಪೊಲೀಸ್ ಸಿಬ್ಬಂದಿ ಜೊತೆ ಸೇರಿ ಧಾರ್ಮಿಕ ವಿಧಿ-ವಿಧಾನಗಳಿಂದ ಯಾದಗಿರಿಯ ಭೀಮಾ ನದಿಯ ತಟದಲ್ಲಿರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಅನಾಥ ಶವಕ್ಕೆ ಮಗಳಾಗಿ ನಿಂತು ಶವ ಸಂಸ್ಕಾರ ಮಾಡಿರುವುದು ಮಹಿಳಾ ದಿನಾಚರಣೆಯ ವಿಶೇಷದ ಜೊತೆಗೆ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಅಪರಾಧ ಪಿಎಸ್ಐ ಶ್ರೀಕಾಂತ ಕಮಲಾಪುರ, ಕಾನ್ಸ್ಟೆಬಲ್ಗಳಾದ ಸಾಬರೆಡ್ಡಿ, ಜಗದೀಶ್, ತಾಯಪ್ಪ, ಶ್ರೀಶೈಲ್ ಉಪಸ್ಥಿತರಿದ್ದರು.