ಯಾದಗಿರಿ: ಜಿಲ್ಲೆಯ ವಿವಿಧೆಡೆ ಬುಧವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಹರ್ಷ ವ್ಯಕ್ತವಾಗಿದೆ.
ಬಿಸಿಲಿನಿಂದ ಬಸವಳಿದ ಜನತೆಗೆ ಕಳೆದ ಎರಡು ದಿನಗಳಿಂದ ಮಳೆ ಸಿಂಚನದಿಂದ ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಆಗಿದೆ.
ಎರಡು ದಿನವೂ ಮಧ್ಯರಾತ್ರಿಯಲ್ಲಿ ಮಳೆಯಾಗುತ್ತಿದ್ದು, ಮತ್ತೆ ಬೆಳಿಗ್ಗೆ ಯಥಾಸ್ಥಿತಿ ವಾತಾವರಣ ಇರುತ್ತದೆ. ಇದರಿಂದ ಮಳೆ ಬಂದರೂ ದಿನ ನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುತ್ತಿಲ್ಲ.
ಕಳೆದ ವರ್ಷ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಭೀಕರ ಬರ ಎದುರಾಗಿದ್ದು, ಈ ಬಾರಿ ಸುರಿಯುವ ಮಳೆಯಿಂದ ರೈತರಿಗೆ ಕೊಂಚ ನೆಮ್ಮದಿ ಸಿಕ್ಕಂತೆ ಆಗಿದೆ.
ಜಿಲ್ಲೆಯ ಶಹಾಪುರ, ಸುರಪುರದಲ್ಲಿ ಉತ್ತಮ ಮಳೆಯಾಗಿದ್ದು, ಯರಗೋಳ ಗ್ರಾಮದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದೆ. ಹುಣಸಗಿ, ಕೆಂಭಾವಿಯಲ್ಲಿ ಸ್ವಲ್ಪ ಮಳೆಯಾಗಿದೆ. ನಾರಾಯಣಪುರ, ಸೈದಾಪುರದಲ್ಲಿ ಮೋಡ ಕವಿದ ವಾತಾವರಣ ಇದೆ.
ವಡಗೇರ ತಾಲ್ಲೂಕು ವ್ಯಾಪ್ತಿಯ ಬಿರನಾಳ, ಬಬಲಾದ, ಗಡ್ಡೆಸೂಗುರ, ಹಾಲಗೇರಾದಲ್ಲಿ ಉತ್ತಮ ಮಳೆಯಾಗಿ, ಜಮೀನುಗಳಲ್ಲಿ ನೀರು ನಿಂತಿದೆ.