ಶಹಾಪುರ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ವಿರೋಧ ಪಕ್ಷಗಳು ಅನವಶ್ಯಕವಾಗಿ ಗೊಂದಲ ಉಂಟು ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ ದೂರಿದರು.
ಇಲ್ಲಿನ ಕುಂಬಾರಗೇರಿ ಮಠದಲ್ಲಿ ಭಾನುವಾರ ಬಿಜೆಪಿ ಪಕ್ಷದ ನಗರ ಘಟಕ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಬಾಗಿಲಿಗೆ ತೆರಳಿ ಕಾಯ್ದೆ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿಕೊಡಬೇಕು. ಯುವಕರು ಸಹ ಕಾಯ್ದೆಯ ಮಹತ್ವದ ಬಗ್ಗೆ ಅರಿತುಕೊಂಡು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದರು.
ನಗರ ಘಟಕದ ಅಧ್ಯಕ್ಷ ದೇವಿಂದ್ರ ಕೊನೇರ, ಮಲ್ಲಿಕಾರ್ಜುನ ಚಿಲ್ಲಾಳ, ಅಡಿವೆಪ್ಪ ಜಾಕಾ, ಚಂದ್ರಶೇಖರ ಯಾಳಗಿ, ಲಾಲ್ ಅಹ್ಮದ ಖುರೇಶಿ, ಅಪ್ಪಣ್ಣ ದಶವಂತ, ಎಂ.ಡಿ.ಅಲಿ,ರಾಘವೇಂದ್ರ ಯಕ್ಷಿಂತಿ, ಮಂಜುನಾಥ ಗಣಾಚಾರಿ, ಶಾಂತಪ್ಪ ಕಟ್ಟಿಮನಿ, ಬಸವರಾಜ ಆನೆಗುಂದಿ ಇದ್ದರು.
ಗ್ರಾಮೀಣ ಘಟಕ: ಬಿಜೆಪಿಯ ಗ್ರಾಮೀಣ ಘಟಕವು ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಭಾನುವಾರ ಸಿಎಎ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿಯ ಹಿರಿಯ ಮುಖಂಡ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ, ಪೌರತ್ವವನ್ನು ಮುಸ್ಲಿಂರಿಂದ ಕಸಿದುಕೊಳ್ಳಲಾಗುತ್ತದೆ. ಎನ್ಆರ್ಸಿ ಜಾರಿಯಿಂದ ದೇಶದ ಮುಸ್ಲಿಂರನ್ನು ದೇಶದಿಂದ ಹೊರ ಹಾಕಲಾಗುತ್ತದೆ ಎಂಬ ಸುಳ್ಳು ವದಂತಿಯನ್ನು ಹಬ್ಬಿಸಿ ಗ್ರಾಮೀಣ ಪ್ರದೇಶದಲ್ಲಿ ಶಾಂತಿಯನ್ನು ಕದಡುವುದು ಸರಿಯಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ಜಾರಿಯಿಂದ ನಮ್ಮ ದೇಶದ ಪ್ರತಿ ಪ್ರಜೆಗೂ ಯಾವುದೇ ತೊಂದರೆ ಇಲ್ಲ. ಅಪಪ್ರಚಾರಗಳಿಗೆ ಯಾರೂ ಕಿವಿಕೊಡಬಾರದು ಎಂದು ತಿಳಿಸಿದರು.