ಕುಟುಂಬದಲ್ಲಿ ಒಟ್ಟು 10 ಜನರಿದ್ದಾರೆ. ತಾಯಿ, ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರನ್ನು ಹೊಂದಿರುವ ದೊಡ್ಡ ಕುಟುಂಬ. ಚಿಕ್ಕಂದಿನಿಂದಲೂ ಕ್ಲೇ ಮಾಡೆಲಿಂಗ್ ಅಂದರೆ ಅಚ್ಚುಮೆಚ್ಚು. ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದವರೆಗೂ ಹೋಗಿ ಬಂದಿದ್ದಾರೆ. ಬಡತನದಿಂದ ಓದು ಮುಂದುವರಿಸಲಾಗದೆ ಸೆಂಟರಿಂಗ್ ಕೆಲಸ ಮಾಡುತ್ತಿದ್ದಾರೆ.ಆದರೆ, ಮಣ್ಣಿನ ಮೇಲಿನ ಮೋಹ ಮಾತ್ರ ಕಡಿಮೆ ಮಾಡಿಕೊಳ್ಳಲಿಲ್ಲ.
ಮನೆಯಲ್ಲೇ ವಿವಿಧ ರೀತಿಯ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಾರೆ. ಆನೆ, ಒಂಟೆ, ಗಣೇಶನ ಮೂರ್ತಿ ಸೇರಿದಂತೆ ಅನೇಕ ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ಶಾಲೆಗಳಿಗೆ ಉಚಿತ ನೀಡುತ್ತಾರೆ. ಶಾಲೆ ಕಾಲೇಜುಗಳಿಂದ, ಸಂಘ ಸಂಸ್ಥೆಗಳಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಬೇಡಿಕೆ ಬಂದರೆ ಆದ್ಯತೆ ಮೇರೆಗೆ ಮೂರ್ತಿಗಳನ್ನು ತಯಾರಿಸಿ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ‘ಈ ಬಾರಿಯೂ ಒಂದೆರೆಡು ಶಾಲೆ ಹಾಗೂ ಸಂಸ್ಥೆಗಳಿಂದ ಬೇಡಿಕೆ ಬಂದಿದೆ’ ಎಂದು ತಿಳಿಸುತ್ತಾರೆ.
ಮಣ್ಣಿನ ಮೂರ್ತಿಯಲ್ಲದೆ ಚಿತ್ರಕಲೆ ಮತ್ತು ಥರ್ಮಾಕೋಲ್ನಿಂದ ಮಾಡುವ ಕೆಲಸದಲ್ಲೂ ಇವರದು ಎತ್ತಿದ ಕೈ. ಚಿತ್ರಕಲೆಯನ್ನು ಅದ್ಭುತವಾಗಿ ರಚಿಸುತ್ತಾರೆ ಎಂದು ಅವರ ಸ್ನೇಹಿತರು ಹೇಳುತ್ತಾರೆ. ಬಡತನದಲ್ಲಿಯೂ ಅದ್ಭುತ ಕಲೆಯನ್ನು ಹೊಂದಿದ ಯುವಕನನ್ನು ಗುರುತಿಸಿ, ಅವರ ಕಲೆಯನ್ನು ಬೆಳಕಿಗೆ ತರುವುದು ಸಮಾಜದ ಜವಾಬ್ದಾರಿಯಾಗಿದೆ.