ಯಾದಗಿರಿ: ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ ನೇತೃತ್ವದಲ್ಲಿ ಹುರುಸಗುಂಡಗಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸನ್ನತಿ ಬ್ಯಾರೇಜ್ನ ಹಿನ್ನೀರಿನಿಂದ ಮುಳುಗಡೆಯಾದ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಚೆನ್ನಾರಡ್ಡಿ ಪಾಟೀಲ ತುನ್ನೂರ, ಸನ್ನತಿ ಬ್ಯಾರೇಜ್ ನಿರ್ಮಾಣ ಸಂಬಂಧ 2004-05ರಲ್ಲಿ ಹುರಸಗುಂಡಗಿ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಲ್ಲದೆ ಬ್ಯಾರೇಜ್ನ ಹಿನ್ನೀರಿನಿಂದ ಗ್ರಾಮ ಮುಳುಗಡೆಯಾಗುವುದರಿಂದ ಪುನರ್ವಸತಿ ಕೇಂದ್ರವೂ ನಿರ್ಮಾಣ ಮಾಡಲಾಗಿದೆ. ಆದರೆ, ಸ್ಥಳಾಂತರಿಸಿದ ಹೊಸ ಗ್ರಾಮದಲ್ಲಿ ಜನತೆಗೆ ಮೂಲಸೌಕರ್ಯ ನೀಡದ ಕಾರಣ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
120 ಎಕರೆ ಸ್ಥಳದಲ್ಲಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಆದರೂ ಅಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹ, ಚರಂಡಿ ಹೀಗೆ ಮೂಲಸೌಕರ್ಯದ ಅಭಾವವಿದೆ. ಈ ಕಾರಣದಿಂದ ಜನತೆ ಹಳೆ ಗ್ರಾಮ ಬಿಟ್ಟು ಅಲ್ಲಿಗೆ ತೆರಳುತ್ತಿಲ್ಲ. ಇನ್ನೂ 40 ಜನರಿಗೆ ನಿವೇಶನದ ಹಕ್ಕುಪತ್ರ ವಿತರಿಸಿಲ್ಲ. ಈ ಸಮಸ್ಯೆಗಳನ್ನು ಜಿಲ್ಲಾಡಳಿತ ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಡಯಾಲಿಸಿಸ್ ಘಟಕಗಳು ಸ್ಥಗಿತಗೊಂಡಿದ್ದು, ಇದರಿಂದ ಬಡ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಈ ಘಟಕ ಆರಂಭಿಸುವಂತೆ ಒತ್ತಾಯಿಸಿದರು.
ಈ ವೇಳೆ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ತಡಿಬಿಡಿ ಮರೀಗೌಡ, ಗ್ರಾಮಸ್ಥರಾದ ವೀರಣ್ಣ ವಿಶ್ವಕರ್ಮ, ಪರಮೇಶ ನಾಯ್ಕಲ್, ಮೋಹನರಾಜ, ದೇವಾನಂದ, ಜಯವಂತ, ಮಲ್ಲಿಕಾರ್ಜುನ , ದೇವರಾಜ, ಈಶ್ವರಪ್ಪ, ಮಲ್ಲಿಕಾರ್ಜುನ ಇದ್ದರು.