ಕೆಂಭಾವಿ: ಪಟ್ಟಣ ಸಮೀಪ ಯಾಳಗಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 36 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ₹5.50 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಯಾಳಗಿ ಗ್ರಾಮದ ಸಿದ್ದಪ್ಪ ಬಸವರಾಜ ಬಾವಿಹೊಲ (21) ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಅದೇ ಗ್ರಾಮದ ಶರಣಮ್ಮ ಗೌಡಪ್ಪಗೌಡ ಬೊಮ್ಮರೆಡ್ಡಿ ಎಂಬುವರ ಮನೆಯಲ್ಲಿ ಮನೆಯ ಮುಂಬಾಗಿಲಿನ ಬೀಗವನ್ನು ಮುರಿದು ಪೆಟ್ಟಿಗೆಯಲ್ಲಿನ 110 ಗ್ರಾಂ ಚಿನ್ನಾಭರಣಕಳ್ಳತನ ಮಾಡಿದ್ದ ಆರೋಪಿ ನಂತರ ತಲೆಮರೆಸಿಕೊಂಡಿದ್ದ. ಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿವೈಎಸ್ಪಿ ಸುರಪುರ ಉಪ ವಿಭಾಗ ವೆಂಕಟೇಶ ಹುಗಿಬಂಡಿ ಅವರ ಮಾರ್ಗದರ್ಶನದಲ್ಲಿ ಹುಣಸಗಿ ವೃತ್ತದ ಸಿಪಿಐ ದೌಲತ್.ಎನ್.ಕೆ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಳ್ಳರ ಶೋಧ ನಡೆಸಿದ್ದರು.
ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೂರು ದಾಖಲಾದ 36 ಗಂಟೆಗಳಲ್ಲಿ ಪ್ರಕರಣ ಭೇಧಿಸಿದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ತಂಡಕ್ಕೆ ಶ್ಲಾಘಿಸಿದ್ದಾರೆ. ತಂಡದಲ್ಲಿ ಕೆಂಭಾವಿ ಠಾಣೆಯ ಪಿಎಸ್ಐ ಗಜಾನಂದ ಬಿರಾದಾರ, ಪ್ರೋಬೆಷನರಿ ಪಿಎಸ್ಐ ರಾಹುಲ ಪವಾಡೆ, ಎಎಸ್ಐ ಮೌನೇಶ ಬಡಿಗೇರ್, ಸಿಬ್ಬಂದಿ ಭೀರಪ್ಪ, ಸುಭಾಸ, ಪರಮಾನಂದ ಇದ್ದರು.