ಯಾದಗಿರಿ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅತಿವೃಷ್ಟಿ, ಪ್ರವಾಹ ಸಂಬಂಧಿಸಿದಂತೆ ಸಭೆಯಲ್ಲಿ ಶಹಾಪುರ ಶಾಸಕ ಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ನಡುವೆ ಅನುದಾನಕ್ಕಾಗಿ ಜಟಾಪಾಟಿ ನಡೆಯಿತು.
ಶಾಸಕ ಬಸಪ್ಪಗೌಡ ದರ್ಶನಾಪುರ ಮಾತನಾಡಿ, ಶಹಾಪುರ ತಾಲ್ಲೂಕಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಸಾಕಷ್ಟು ಬೆಳೆ, ರಸ್ತೆ ಹಾನಿಯಾಗಿದೆ. ಜಿಲ್ಲೆಗೆ ಸರ್ಕಾರ ₹10.50 ಕೋಟಿ ಜಮಾ ಮಾಡಿದೆ. ಆದರೆ, ಶಹಾಪುರ ತಾಲ್ಲೂಕಿಗೆ ನಯಾಪೈಸೆ ಕೂಡ ನೀಡಿಲ್ಲ. ಇದರಿಂದ ತಾಲ್ಲೂಕನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮತ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸರ್ಕಾರ ನಮ್ಮ ತಾಲ್ಲೂಕಿಗೆ ಅನ್ಯಾಯ ಮಾಡಿದೆ. ಅವರಿಗೆ ಅನುದಾನ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ, ನಮಗೆ ಒಂದು ಪೈಸೆಯೂ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಭು, ಈ ಬಗ್ಗೆ ಪರಿಶೀಲಿಸುತ್ತೇನೆ. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾ ರೆಯೇ ಇಲ್ಲವೆ ಎಂದು ತಿಳಿದುಕೊಂಡು ಸರಿಪಡಿಸುತ್ತೇನೆ ಎಂದರು.
ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಪರಿಶೀಲಿಸುತ್ತೇನೆ ಎನ್ನುವ ಹಾರಿಕೆ ಉತ್ತರ ನೀಡಬೇಡಿ. ಆಗಿರುವ ಲೋಪವನ್ನು ಸರಿಪಡಿಸಿ ಅನುದಾನ ನೀಡುತ್ತೇನೆ ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಶಹಾಪುರ ತಾಲ್ಲೂಕನ್ನು ಕರ್ನಾಟಕ ನಕ್ಷೆಯಿಂದ ತೆಗೆದುಹಾಕಿ ಎಂದು ಗರಂ ಆದರು.
ಸರ್ಕಾರದಿಂದ ಶಹಾಪುರ ಮತಕ್ಷೇತ್ರಕ್ಕೆ ಅನುದಾನ ಕೊಡಿಸುತ್ತೀರಾ ಇಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸಚಿವ ಪ್ರಭು ಚವ್ಹಾಣ ಮಾತನಾಡಿ, ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ
ಎಂದರು.
ಶಹಾಪುರ ತಾಲ್ಲೂಕಿನಲ್ಲಿ ಮಳೆಯೇ ಬಂದಿಲ್ಲವೇ. ಶಹಾಪುರವನ್ನು ಯಾಕೆ ಇಷ್ಟು ನಿರ್ಲಕ್ಷ್ಯ ಮಾಡಲಾಗಿದೆ. ನಮಗೆ ಸುಣ್ಣ ಅಲ್ಲ. ವಿಷ ನೀಡಿದ್ದೀರಿ. ಮೂರು ತಿಂಗಳಿಗೊಮ್ಮೆ ಸಭೆ ಮಾಡುತ್ತೀರಿ. ಒಂದು ದಿನದಲ್ಲಿ ಮತ್ತೆ ನಿಮ್ಮ ಊರು ಸೇರುತ್ತೀರಿ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವರಿಗೆ ಕ್ಲಾಸ್: ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಇನ್ನೂ ತೆಗೆದಿಲ್ಲ. ಈಗಾಗಲೇ ಕಟಾವ್ ಆರಂಭವಾಗಿದೆ. ನವೆಂಬರ್ 30ರಿಂದ ಡಿಸೆಂಬರ್ಗೆ ನೋಂದಣಿ ಆರಂಭ ಮಾಡಲಾಗುತ್ತಿದೆ. ಆ ನಂತರ ಖರೀದಿ ಕೇಂದ್ರ ಆರಂಭಿಸಿದರೆ ಸಣ್ಣ, ಅತಿ ಸಣ್ಣ ರೈತರು ಅಷ್ಟು ದಿನಗಳ ಕಾಲ ತಮ್ಮ ಬಳಿ ಭತ್ತ ಉಳಿಸಿಕೊಳ್ಳಲು ಸಾಧ್ಯವೇ. ನೋಂದಣಿ ಜೊತೆಗೆ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಶಾಸಕ ದರ್ಶನಾಪುರ ಒತ್ತಾಯಿಸಿದರು.
***
‘ಕಾಂಗ್ರೆಸ್ ಶಾಸಕರ ಮೇಲೆ ಕೆಟ್ಟ ದೃಷ್ಟಿ’
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ಕೆಟ್ಟ ದೃಷ್ಟಿ ಬೀರಿದೆ ಎಂದು ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆರೋಪಿಸಿದರು.
ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸರ್ಕಾರವಿದ್ದಾಗ ಬಿಡುಗಡೆ ಮಾಡಿದ್ದ ಅನುದಾನವನ್ನೇ ಬಿಜೆಪಿ ಸರ್ಕಾರ ನೀಡಿಲ್ಲ. ಇನ್ನೂ ಈ ಸರ್ಕಾರ ಅನುದಾನ ನೀಡಿಲ್ಲ. ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.
ನೀರಾವರಿ, ಕೃಷಿ ಕ್ಷೇತ್ರ, ಆರೋಗ್ಯ ಸೇರಿದಂತೆ ಯಾವ ಕ್ಷೇತ್ರಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ, ವಿರೋಧ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದೇನೆ. ವಿಧಾನಸಭೆಯಲ್ಲೂ ಪ್ರಶ್ನೆ ಮಾಡಿದ್ದೇನೆ. ಆದರೆ, ಸರ್ಕಾರದಿಂದ ಅನುದಾನ ಬಂದಿಲ್ಲ ಎಂದರು.
ಯಡಿಯೂರಪ್ಪ ಅವಧಿಕಾರಾವಧಿ 6 ತಿಂಗಳೋ, 1 ವರ್ಷ, ಒಂದೂವರೆ ವರ್ಷ ಇದೆ. ಇಷ್ಟರಲ್ಲಿ ಎನೂ ಬೇಕಾದರೂ ಆಗಬಹುದು. ಹೀಗಾಗಿ ಅಧಿಕಾರದಲ್ಲಿ ಇದ್ದಷ್ಟು ದಿನ ಎಲ್ಲ ಕ್ಷೇತ್ರಗಳಿಗೆ ಅನುದಾನ ನೀಡಲಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.