ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೆ ದಿನ ಮಂಗಳವಾರ ರಾತ್ರಿ ‘ದೇವರ ದಫನ್’ ಮಾಡಿ ಮನೆಗೆ ಬರುತ್ತಿರುವಾಗ ಕುರುಬ ಹಾಗೂ ಮಾದಿಗ ಸಮುದಾಯದವರ ಮಧ್ಯೆ ಕಲ್ಲು ತೂರಾಟ ನಡೆದಿದೆ.
ಮರೆಮ್ಮ, ಮಲ್ಲಪ್ಪ ಪೂಜಾರಿ ಎನ್ನುವವರು ಗಾಯಗೊಂಡಿದ್ದು, ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ದೇವರ ದಫನ್’ ಮಾಡಿ ಮನೆ ಕಡೆ ಬರುತ್ತಿರುವಾಗ ಕುರುಬ ಸಮುದಾಯದ ಯುವಕ ಮಾದಿಗ ಸಮಾಜದ ವ್ಯಕ್ತಿಯೊಬ್ಬರ ಕಾಲು ತುಳಿದಿದ್ದಾರೆ. ಇದರಿಂದ ಮಾದಿಗ ಸಮುದಾಯದವರು ಕೋಪಗೊಂಡು ಮಾತಿಗೆ ಮಾತು ಬೆಳೆದು ಕಲ್ಲು ತೂರಾಟವಾಗಿದೆ’ ಎಂದು ಪೊಲೀಸರು ತಿಳಿಸಿದರು.
ಸುದ್ದಿ ತಿಳಿದ ತಕ್ಷಣ ಡಿವೈಎಸ್ಪಿ ಶಿವಣ್ಣಗೌಡ ಪಾಟೀಲ ಭೇಟಿ ನೀಡಿ ಪರಿಸ್ಥಿತಿ ತಹಬಂದಿಗೆ ತಂದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಇದೆ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕುರುಬ ಸಮುದಾಯದ 15 ಜನ ಹಾಗೂ ಇನ್ನಿತರರ ಮೇಲೆ ಭೀಮರಾಯನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.