ಯಾದಗಿರಿ: ‘ಸಿಗ್ನಲ್ ಇದೆ: ಜೀಬ್ರಾ ಕ್ರಾಸ್ಗಳೇ ಇಲ್ಲ’ ಎನ್ನುವ ಶೀರ್ಷಿಕೆಯಡಿ ಡಿಸೆಂಬರ್ 7ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಕಳೆದ ಎರಡು ದಿನಗಳಿಂದ ಸಿಗ್ನಲ್ಗಳ ಬಳಿ ಜೀಬ್ರಾ ಕ್ರಾಸ್ ಅಳವಡಿಕೆ ಕಾರ್ಯ ನಗರಸಭೆಯಿಂದ ನಡೆಯುತ್ತಿದೆ.
ಸದ್ಯ ಸಿಗ್ನಲ್ಗಳಿರುವ ಶಾಸ್ತ್ರಿವೃತ್ತ, ಸುಭಾಷ್ ವೃತ್ತದ ಬಳಿ ಜೀಬ್ರಾ ಕ್ರಾಸ್ ಅಳವಡಿಸಲಾಗುತ್ತಿದೆ. ನಂತರ ಹಂತಹಂತವಾಗಿ ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲುಜೀಬ್ರಾ ಕ್ರಾಸ್ ಹಾಕಲಾಗುತ್ತಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಬಳಿ ಜೀಬ್ರಾಕ್ರಾಸ್ಗೆ ಪ್ರತ್ಯೇಕವಾದ ಅನುದಾನವಿಲ್ಲವೆಂದು ಕೈಚೆಲ್ಲಿ ಕುಳಿತಿತ್ತು.ಜೀಬ್ರಾ ಕ್ರಾಸ್ ಇಲ್ಲದಿದ್ದರಿಂದ ಪಾದಚಾರಿಗಳು ರಸ್ತೆ ದಾಟಲು ಜೀವ ಕೈಯಲ್ಲಿಡಿದುಕೊಂಡು ದಾಟಬೇಕಾಗಿತ್ತು. ಅಲ್ಲದೆ ವಾಹನ ಸವಾರರು ಎಲ್ಲಿ ನಿಲ್ಲಿಸಬೇಕು ಎಂಬ ಗೊಂದಲದಲ್ಲಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ವರದಿ ಎಚ್ಚರಿಸಿದ ಮೇಲೆ ನಗರಸಭೆ ವತಿಯಿಂದ ನಗರದ ವಿವಿಧ ಕಡೆ ಜೀಬ್ರಾ ಕ್ರಾಸ್ ಅಳವಡಿಸುವ ಕೆಲಸ ಮಾಡಲಾಗುತ್ತಿದೆ.
ನಗರದಲ್ಲಿ ಸಿಗ್ನಲ್ಗಳು ಇದ್ದರೂ ನಿಯಮಗಳು ಪಾಲನೆಯಾಗುತ್ತಿರಲಿಲ್ಲ. ಸಿಗ್ನಲ್ಗಳ ಬಳಿ ವಾಹನ ಸವಾರರು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದರು. ಈಗ ಜೀಬ್ರಾ ಕ್ರಾಸ್ ಅಳವಡಿಸಿದ್ದರಿಂದ ಪಾದಚಾರಿಗಳಿಗೆ ಸಂಚಾರಕ್ಕೆ ಅನುಕೂಲ ಕಲ್ಪಿಸಿದಂತಾಗಿದೆ.
ಸಿಗ್ನಲ್ಗಳ ಬಳಿ ವಾಹನ ಸವಾರರು ಮನಸ್ಸಿಗೆ ಬಂದಂತೆ ವಾಹನಗಳನ್ನು ನಿಲ್ಲಿಸುವುದು ಇದರಿಂದ ತಪ್ಪಲಿದೆ. ಜೀಬ್ರಾ ಕ್ರಾಸ್ಗಳ ಹಿಂದೆಯೇ ವಾಹನಗಳನ್ನು ನಿಲ್ಲಿಸಬೇಕಾಗಿದೆ.
***
ನಗರಸಭೆ ವತಿಯಿಂದ ನಗರದಲ್ಲಿ ಜೀಬ್ರಾ ಕ್ರಾಸ್ ಹಾಕುತ್ತಿದ್ದಾರೆ. ಇನ್ನು ಮೇಲಾದರೂ ವಾಹನ ಸವಾರರು ಪಾದಚಾರಿಗಳಿಗೆ ಜಾಗಬಿಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ನಗರದ ವಿವಿಧ ಕಡೆಗಡೆಗಳಲ್ಲಿ ಜೀಬ್ರಾ ಕ್ರಾಸ್ ಹಾಕಿಸಲಾಗುತ್ತಿದೆ. ಹಳೆ, ಹೊಸ ಬಸ್ ನಿಲ್ದಾಣ, ಹೊಸಳ್ಳಿ ಕ್ರಾಸ್, ಕನಕದಾಸ ವೃತ್ತ, ಪದವಿ ಕಾಲೇಜು, ಹತ್ತಿಕುಣಿ ಕ್ರಾಸ್ ಬಳಿ ಜೀಬ್ರಾ ಕ್ರಾಸ್ ಹಾಕಲು ತಿಳಿಸಲಾಗಿದೆ.