ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತ್ಯಾಗದ ಪ್ರತಿರೂಪ ವಾಸವಿ ದೇವಿ: ವಸಂತಮ್ಮ ಮೀರಿಯಾಲ್

ವಾಸವಿ ಕನ್ನಿಕಾಪರಮೇಶ್ವರಿ ಅಗ್ನಿ ಪ್ರವೇಶ ಪ್ರಯುಕ್ತ ವಿಶೇಷ ಪೂಜೆ
Published 11 ಫೆಬ್ರುವರಿ 2024, 15:25 IST
Last Updated 11 ಫೆಬ್ರುವರಿ 2024, 15:25 IST
ಅಕ್ಷರ ಗಾತ್ರ

ಸೈದಾಪುರ: ‘ಗೌರವಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆದಿಶಕ್ತಿ ವಾಸವಿ ಕನ್ನಿಕಾ ಪರಮೆಶ್ವರಿ ದೇವಿ ಮನುಕುಲಕ್ಕೆ ಶಾಂತಿ ಮತ್ತು ತ್ಯಾಗದ ಪ್ರತಿರೂಪವಾಗಿದ್ದಾಳೆ’ ಎಂದು ಆರ್ಯ ವೈಶ್ಯ ಮಹಿಳಾ ಸಂಘದ ಅಧ್ಯಕ್ಷೆ ವಸಂತಮ್ಮ ಮೀರಿಯಾಲ್ ಅಭಿಪ್ರಾಯಪಟ್ಟರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆರ್ಯ ವೈಶ್ಯ ಮಹಿಳಾ ಸಂಘದಿಂದ ಏರ್ಪಡಿಸಿದ್ದ ಕನ್ನಿಕಾ ಪರಮೇಶ್ವರಿ ದೇವಿಯ ಅಗ್ನಿ ಪ್ರವೇಶ ದಿನದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಲೌಕಿಕ ಜೀವನವನ್ನು ತ್ಯಾಗ ಮಾಡಿ ಅಗ್ನಿ ಪ್ರವೇಶ ಮಾಡುವುದರ ಮೂಲಕ ದೇವತಾ ಸ್ಥಾನಮಾನ ಪಡೆದ ಅವತಾರಿಣಿ ಕನ್ನಿಕಾಪರಮೇಶ್ವರಿ. ಆರ್ಯ ವೈಶ್ಯ ಕುಲದೇವತೆ ವಾಸವಿ ಕನ್ನಿಕಾ ಪರಮೇಶ್ವರಿ ಮಾತೆಯು ಅಗ್ನಿ ಪ್ರವೇಶ ಮಾಡಿ ನಂತರ ಸಮಸ್ತ ವೈಶ್ಯ ಸಮಾಜದ ಉದ್ಧಾರಕ್ಕೆ ದಿವ್ಯ ದರ್ಶನ ನೀಡಿದ ಪುಣ್ಯದಿನ ಇಂದು. ವೈಶ್ಯ ಸಮಾಜವು ಅಹಿಂಸೆ, ತ್ಯಾಗವನ್ನು ನಂಬಿದ ಜನಾಂಗವಾಗಿದೆ, ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು. ಪ್ರತಿಯೊಂದು ಜೀವಿಗಳಿಗೆ ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲೆಂದು ನಾವುಗಳು ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ’ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಕೆ.ಬಿ.ಭಾರತಿ, ಕಾರ್ಯದರ್ಶಿ ಕೆ.ಪಿ. ಸವಿತಾ ವಸಂತಕುಮಾರ, ಗ್ರಾ.ಪಂ. ಉಪಾಧ್ಯಕ್ಷೆ ಕವಿತಾ ಆನಂದ ಮಿರಿಯಾಲ್, ಕೋಶಾಧ್ಯಕ್ಷೆ ರಾಧಾ ಸಂಗೊಳಿಗಿ, ಆರ್ಯವೈಶ್ಯ ಸಂಘದ ಕಾರ್ಯದರ್ಶಿ ವೆಂಕಟೇಶ ಪುರಿ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬಾದಾಮಿ ಸೇರಿದಂತೆ ಆರ್ಯ ವೈಶ್ಯ ಸಮಾಜದ ಜನರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಕ್ತಪಾತವಾಗದೆ ಕಾಮಾಂಧ ವಿಷ್ಣುವರ್ಧನನಿಗೆ ಪಾಠ ಕಲಿಸಿದ ಕನ್ನಿಕಾ ಪರಮೇಶ್ವರಿ ಸ್ತ್ರೀಸ್ವಾಭಿಮಾನದ ಸಂಕೇತವಾಗಿದ್ದಾಳೆ. ಆರ್ಯವೈಶ್ಯ ಸಮಾಜದ ಕುಲದೇವೆತೆಯಾಗಿ ಪೂಜಿಸಲ್ಪಡುತ್ತಿರುವ ವಾಸವಿ ದೇವಿಯ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸುತ್ತ ಮನುಕುಲಕ್ಕೆ ಮಾದರಿಯಾಗಿ ಜೀವಿಸಬೇಕು
– ವೆಂಕಟೇಶ ಪುರಿ ಕಾರ್ಯದರ್ಶಿ ಆರ್ಯವೈಶ್ಯ ಸಮಾಜ ಸೈದಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT