ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಯೋಜನೆಗೆ ಜನಗಣತಿಯೇ ಆಧಾರ

ಜನಗಣತಿಯ ಕ್ಷೇತ್ರ ತರಬೇತುದಾರರಿಗೆ ಮಾಸ್ಟರ್ ಟ್ರೇನರ್‌ಗಳಿಂದ ತರಬೇತಿ
Last Updated 14 ಮಾರ್ಚ್ 2020, 10:42 IST
ಅಕ್ಷರ ಗಾತ್ರ

ಯಾದಗಿರಿ: ಸಾಮಾನ್ಯ ವ್ಯಕ್ತಿಯ ಅನುಕೂಲತೆಗಾಗಿ ವಿವಿಧ ಕಲ್ಯಾಣ ಯೋಜನೆಗಳು ರಚಿಸಲು ಮತ್ತು ಅನುದಾನ ಬಿಡುಗಡೆಗೆ ಜನಗಣತಿಯೇ ಮೂಲಾಧಾರವಾಗುತ್ತದೆ. ನಿಖರ ಜನಗಣತಿಯಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಜನಗಣತಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪಟ್ಟಿ ಪರಿಷ್ಕರಣೆ ಕಾರ್ಯದ ಅಂಗವಾಗಿ ಕ್ಷೇತ್ರ ತರಬೇತುದಾರರಿಗೆ ಮಾಸ್ಟರ್ ಟ್ರೇನರ್‌ಗಳಿಂದ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಲೋಕಸಭೆ, ವಿಧಾನಸಭೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಸ್ಥಾನಗಳು ನಿರ್ಧಾರವಾಗುತ್ತವೆ. 2021ರ ಜನಗಣತಿಯ ಅಂಕಿ-ಅಂಶಗಳು ಮುಂದಿನ 10 ವರ್ಷಗಳವರೆಗೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗವಾಗುತ್ತವೆ ಎಂದು ತಿಳಿಸಿದರು.

ಕ್ಷೇತ್ರ ತರಬೇತುದಾರರು ಜನಗಣತಿಗೆ ಸಂಬಂಧಪಟ್ಟ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳಬೇಕು. ಯಾವುದೇ ಸಂಶಯಗಳನ್ನು ಇಟ್ಟುಕೊಂಡು ಜನಗಣತಿಗೆ ಹೋದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತರಬೇತಿಯಲ್ಲಿ ನೀಡುವ ಪ್ರತಿಯೊಂದು ಅಂಶಗಳನ್ನು ಗಮನವಿಟ್ಟು ಆಲಿಸಬೇಕು. ಸಂಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಜನಗಣತಿಯ ಬಗ್ಗೆ ಪೂರ್ವಾಭ್ಯಾಸ ಮಾಡಿ, ಸ್ವತಃ ಅನುಭವ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿ, ಜನಗಣತಿ ರಾಷ್ಟ್ರೀಯ ಕಾರ್ಯವಾಗಿದೆ. ಜನಗಣತಿ ಕಾರ್ಯಕ್ಕೆ ನೇಮಕವಾದ ಪ್ರತಿಯೊಬ್ಬ ಅಧಿಕಾರಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು. ಗೈರಾದವರಿಗೆ ನೋಟಿಸ್ ನೀಡಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಸ್ಟರ್ ಟ್ರೇನರ್‌ಗಳಾದ ಪ್ರಹ್ಲಾದ್ ಜೋಷಿ ಮತ್ತು ಸಿದ್ದಣ್ಣ ಡಿಗ್ಗಿ ಮಾತನಾಡಿ, ದೇಶದಲ್ಲಿ ಮೊದಲ ಜನಗಣತಿಯನ್ನು 1872ರಲ್ಲಿ ಬೇರೆ ಬೇರೆ ಸಮಯಗಳಲ್ಲಿ ಕೈಗೊಳ್ಳಲಾಯಿತು. 1881ರಲ್ಲಿ ಇಡೀ ದೇಶದಲ್ಲಿ ಏಕಕಾಲಕ್ಕೆ ಜನಗಣತಿ ನಡೆಸಲಾಯಿತು. ಆಗಿನಿಂದ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯದ ನಂತರ 2021ರ ಜನಗಣತಿ 8ನೇಯದ್ದಾಗಿದೆ ಎಂದು ವಿವರಿಸಿದರು.

ಕ್ಷೇತ್ರ ತರಬೇತುದಾರರಿಗೆ ನೀಡಿರುವ ಕೈಪಿಡಿಗಳಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ಜನಗಣತಿಯ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಅವುಗಳನ್ನು ಓದಿ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಯಾವುದೇ ಅನುಮಾನಗಳಿದ್ದಲ್ಲಿ ಸ್ಪಷ್ಟೀಕರಣ ಪಡೆಯಲು ಹಿಂಜರಿಯಬಾರದು ಎಂದು ಸಲಹೆ ನೀಡಿದರು.

ಜನಗಣತಿಗೆ ನೇಮಕವಾದ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

***

2020ರ ಏ.15ರಿಂದ ಮೇ 29ರವರೆಗೆ ಮನೆಪಟ್ಟಿ, ಮನೆಗಣತಿ, ರಾಷ್ಟ್ರೀಯ ಜನಸಂಖ್ಯಾ ಪಟ್ಟಿಯ ಪರಿಷ್ಕರಣೆ ನಡೆಯಲಿದೆ. 2021ರ ಫೆ. 9ರಿಂದ ಫೆ.28ರವರೆಗೆ ಜನಗಣತಿ ನಡೆಯಲಿದೆ
ಗೆಜ್ಜೆ ಗೋಪಾಲಕೃಷ್ಣ, ಜನಗಣತಿಯ ಜಿಲ್ಲಾ ನೋಡಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT