ಯಾದಗಿರಿ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎನ್. ಅಕ್ಕಿ ಅವರಿಗೆ ಅಭಿನಂದನಾ ಸಮಾರಂಭ ಬುಧವಾರ ಏರ್ಪಡಿಸಲಾಗಿತ್ತು.
‘ಜಿಲ್ಲೆಯ ಹಿರಿಯ ಸಾಹಿತಿ ಡಿ.ಎನ್. ಅಕ್ಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ’ ಎಂದು ಗುರುಮಠಕಲ್ ಖಾಸಾಮಠದ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಕ್ಕಿ ಅವರು ಸಂಶೋಧನೆ, ಚಿತ್ರಕಲೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದು ಸರಿಯಾದ ನಿರ್ಧಾರವಾಗಿದೆ. ಅಕ್ಕಿಯವರಿಂದ ಮತ್ತಷ್ಟು ಸಂಶೋಧನೆಗಳು ನಡೆಯಲಿ. ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ ಎಂದು ಆಶಿಸಿದರು.
ಪರಿಷತ್ ಗೌರವ ಕಾರ್ಯದರ್ಶಿ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಡಿ.ಎನ್. ಅಕ್ಕಿ ಅವರು ಬಿ. ಮಹಾದೇವಪ್ಪ ಅವರ ಗರಡಿಯಲ್ಲಿ ಕೆಲಸ ಮಾಡಿದ್ದಾರೆ. ಈ ಸಾಧಕರಿಗೆಗೌರವ ಸಿಕ್ಕಿರುವುದು ಸಂತೋಷದ ಸಂಗತಿ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾದಗಿರಿ ಕಸಾಪ ಅಧ್ಯಕ್ಷ ಡಾ. ಭೀಮರಾಯ ಲಿಂಗೇರಿ, ವಡಗೇರಾ ಕಸಾಪ ಅಧ್ಯಕ್ಷ ಡಾ. ಗಾಳೆಪ್ಪ, ಸಾಹಿತಿ ಶೋಭಾ ಸಾಲಮಂಟಪಿ, ಕಸಾಪ ಮಹಿಳಾ ಪ್ರತಿನಿಧಿ ನಾಗರತ್ನ ಅನಪುರ, ಕಸಾಪ ಗೌರವ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ, ಶಿವಶರಣಪ್ಪ ನಾಸಿ, ಡಾ.ಎಸ್.ಎಸ್. ನಾಯಕ ಇದ್ದರು.