ಹೆಡಗಿಮದ್ರ : ಗ್ರಾಮದ ಹಲವು ಕಡೆಗಳಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದು, ಮಲಿನ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭಯ ಗ್ರಾಮಸ್ಥರಲ್ಲಿ ಆವರಿಸಿದೆ.
ಠಾಣಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 2 ವಾರ್ಡಗಳು, 6 ಜನ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರಿದ್ದು, 2,500 ಸಾವಿರ ಜನಸಂಖ್ಯೆ ಇದೆ.
‘ಮಳೆ ನೀರು ಚರಂಡಿ ಮೂಲಕ ಹರಿಯದೆ, ರಸ್ತೆ ಮೇಲೆ ಸಂಗ್ರಹವಾಗಿ, ರಸ್ತೆಗಳು ಕೆಸರು ಗದ್ದೆಗಳಾಗಿವೆ. ಮಲಿನ ನೀರಿನಿಂದ ಸೊಳ್ಳೆಗಳು ಹೆಚ್ಚಿವೆ. ಗ್ರಾಮ ಪಂಚಾಯತಿ ಸಿಬ್ಬಂದಿ ಮಾತ್ರ ತ್ಯಾಜ್ಯ ಸ್ವಚ್ಛತೆಗೆ ಮುಂದಾಗದೆ ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಯುವಕ ಸಂಗಮೇಶ್ ಕೆಂಭಾವಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಗ್ರಾಮಸ್ಥರು ನಿದ್ರೆ ಮಾಡಲು ಆಗುತ್ತಿಲ್ಲ.ಕಾಲರಾ, ಮಲೇರಿಯ ಭೀತಿ ಆವರಿಸಿದೆ’ ಎಂದರು.
ರಸ್ತೆಯ ಅಕ್ಕ ಪಕ್ಕದಲ್ಲಿ ಮುಳ್ಳಿನ ಪೊದೆಗಳು ಆವರಿಸಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ, ಇದನ್ನು ಕಟಾವ್ ಮಾಡಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಗ್ರಾಮದ ರೈತ ಕಾರ್ಮಿಕ ಸಂಘಟನೆಯ ಸದಸ್ಯ ಜಮಾಲ್ ಸಾಬ್ ಒತ್ತಾಯಿಸಿದ್ದಾರೆ.
ಹೆಡಗಿಮದ್ರ ಗ್ರಾಮದ ವಿದ್ಯುತ್ ಪರಿವರ್ತಕದ ಸುತ್ತ ಮುಳ್ಳಿನ ಪೊದೆ ಆವರಿಸಿದೆ