ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾದಗಿರಿ ನಗರ ಠಾಣೆ ಭಾವನಾತ್ಮಕ ಕಟ್ಟಡವಲ್ಲ’

ಮಂದಿರ, ಮಸೀದಿ, ಚರ್ಚ್‌ ಅಲ್ಲ, ಧಾರ್ಮಿಕ ಕಟ್ಟಡವೂ ಅಲ್ಲ
Last Updated 8 ಅಕ್ಟೋಬರ್ 2021, 8:11 IST
ಅಕ್ಷರ ಗಾತ್ರ

ಯಾದಗಿರಿ: ನಗರ ಪೊಲೀಸ್‌ ಠಾಣೆಯನ್ನು ಕೆಡವಲು ಪೊಲೀಸ್‌ ಇಲಾಖೆ ಟೆಂಡರ್ ಕರೆಯಲಾಗಿದೆ ಎನ್ನುವ ವಿಷಯ ಜಿಲ್ಲೆಯಲ್ಲಿ ಈಗ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನಿವೃತ್ತ ಉಪನ್ಯಾಸಕ ಸಿ.ಎಂ. ಪಟ್ಟೇದಾರ್ ‘ನಗರ ಪೊಲೀಸ್‌ ಠಾಣೆ ಧಾರ್ಮಿಕ ಸ್ಥಳವಲ್ಲ. ಅದೊಂದು ಭಾವನಾತ್ಮಕ ಕಟ್ಟಡವೂ ಅಲ್ಲ. ಹೀಗಾಗಿ ಇದನ್ನು ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವುದು ನನಗೇನೂ ತಪ್ಪು ಅನಿಸುವುದಿಲ್ಲ’ ಎನ್ನುತ್ತಾರೆ.

‘ಮಂದಿರ, ಮಸೀದಿ, ಚರ್ಚ್‌ ಆಗಿದ್ದರೆ ಅದೊಂದು ಭಾವನಾತ್ಮಕ ವಿಷಯವಾಗುತ್ತಿತ್ತು. ಆದರೆ, ಇಂಥ ಸನ್ನಿವೇಶ ಇಲ್ಲಿಲ್ಲ. ಪೊಲೀಸ್‌ ಇಲಾಖೆ ಈ ಕಟ್ಟಡವನ್ನು ಕೆಡವಲು ಕೆಟ್ಟ ಉದ್ದೇಶಗಳೇನು ಇಲ್ಲ. ನೂತನ ಕಟ್ಟಡ ನಿರ್ಮಾಣಕ್ಕೆ ನಮ್ಮ ಸ್ವಾಗತವಿದೆ’ ಎಂದು ತಿಳಿಸುತ್ತಾರೆ.

ಸಾಹಿತಿ ಅಯ್ಯಣ್ಣ ಹುಂಡೇಕರ್‌ ‘ನಗರದ ಹೃದಯ ಭಾಗವಾಗ ಗಾಂಧಿ ವೃತ್ತದ ನಗರ ಪೊಲೀಸ್‌ ಠಾಣೆ ಕಳಸಪ್ರಾಯವಾಗಿದೆ. ಕೆಲ ಧಾರ್ಮಿಕ ಆಚರಣೆಗಳನ್ನೇ ಇಲ್ಲಿಂದಲೇ ಆರಂಭಿಸಲಾಗುತ್ತಿದೆ’ ಎಂದು ತಿಳಿಸುತ್ತಾರೆ.

‘ಹೋಳಿ ಹಬ್ಬವನ್ನು ಆಚರಿಸುವ ಮುನ್ನ ಪೊಲೀಸ್‌ ಠಾಣೆಗೆ ತೆರಳಿ ಅಲ್ಲಿಂದ ಮೈಲಾ‍ಪುರ ಅಗಸಿಗೆ ಬಣ್ಣ ತರಲು ತೆರಳಲಾಗುತ್ತಿತ್ತು. ಅಂಥ ಧಾರ್ಮಿಕ ಭಾವನಾತ್ಮಕ ವಿಷಯವನ್ನು ಈ ಕಟ್ಟಡ ಒಳಗೊಂಡಿದೆ’ ಎಂದು ಮಾಹಿತಿ ನೀಡುತ್ತಾರೆ.

‘ನೂರಾರು ವರ್ಷಗಳ ಇತಿಹಾಸವಿರುವ ಕಟ್ಟಡ ನೆಲಸಮ ಮಾಡುವುದು ಎಷ್ಟು ಮಾತ್ರವೂ ಸರಿಯಲ್ಲ. ಕಟ್ಟಡದ ನಾಲ್ಕು ದಿಕ್ಕುಗಳಿಂದಲೂ ಅಕ್ಕಪಕ್ಕದ ಘಟನೆಗಳನ್ನುಇಲ್ಲಿಂದಲೇ ವೀಕ್ಷಣೆ ಮಾಡಬಹುದಾಗಿದೆ. ನಗರಕ್ಕೆ ಇದು ಐತಿಹಾಸಿಕ ಶ್ರೇಯಸ್ಸು ಆಗಿದೆ. ಬ್ರಿಟಿಷರುಈ ಕಟ್ಟಡವನ್ನು ನಿರ್ಮಿಸಿದ್ದಾರೆ. ಈಗಿನ ಸರ್ಕಾರವಲ್ಲ. ಈ ಕಟ್ಟಡ ತೆರವುಗೊಂಡರೆ ಗಾಂಧಿ ವೃತ್ತದ ಮಹತ್ವ ಕಳೆಗುಂದುತ್ತದೆ’ ಎನ್ನುತ್ತಾರೆ ಅವರು.

‌**
ಪೊಲೀಸ್‌ ಇಲಾಖೆ ಕೆಟ್ಟದ್ದೇನೂ ಮಾಡುತ್ತಿಲ್ಲ. ನಗರ ಠಾಣೆಯನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಲು ಟೆಂಡರ್‌ ಕರೆಯಲಾಗುತ್ತಿದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು
-ಸಿ.ಎಂ. ಪಟ್ಟೇದಾರ್, ನಿವೃತ್ತ ಉಪನ್ಯಾಸಕ

**

ನಗರ ಪೊಲೀಸ್‌ ಠಾಣೆ ನಗರದ ಮಧ್ಯ ಭಾಗದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಈ ಕಟ್ಟಡವಿದ್ದು, ಇದನ್ನು ಯಾವುದೇ ಕಾರಣಕ್ಕೂ ನೆಲಸಮಗೊಳಿಸಬಾರದು
-ಅಯ್ಯಣ್ಣ ಹುಂಡೇಕರ್‌, ‌ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT