ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದ ನಕಲಿ ವೈದ್ಯರ ಮಳಿಗೆ ಮೇಲೆ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ನೇತೃತ್ವದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ದಾಳಿ ಮಾಡಿ ಮಳಿಗೆ ಜಪ್ತಿ ಮಾಡಲಾಯಿತು.
ಆರೋಗ್ಯ ಇಲಾಖೆಯಿಂದ ಖಚಿತ ಮಾಹಿತಿ ಸಂಗ್ರಹಿಸಿಕೊಂಡ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರ ನೇತೃತ್ವದ ತಂಡ, ಗ್ರಾಮಕ್ಕೆ ರಾತ್ರಿ ವೇಳೆ ಆಗಮಿಸಿ ನಕಲಿ ವೈದ್ಯರ ಮಳಿಗೆ (ಆಸ್ಪತ್ರೆ) ಮೇಲೆ ದಾಳಿ ಮಾಡಿದಾಗ ವೈದ್ಯ ನಾಪತ್ತೆಯಾಗಿದ್ದ. ನಂತರ ಮಳಿಗೆಗೆ ಬೀಗ ಹಾಕಲಾಯಿತು.
ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ 'ಪ್ರಜಾವಾಣಿ'ಗೆ ತಿಳಿಸಿದರು.
ಗ್ರಾಮದಲ್ಲಿ ಖಾಸಗಿ ನಕಲಿ ವೈದ್ಯರ ಕುರಿತು 'ಪ್ರಜಾವಾಣಿ' ಮೇ 14 ರಂದು 'ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳು' ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.
ಈ ವೇಳೆ ಯಾದಗಿರಿ ಗ್ರಾಮೀಣ ಪಿಎಸ್ ಐ ಸುರೇಶ ಚವಾಣ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಗ್ರಾಮ ಸಹಾಯಕ ಜಮಾಲ್ ಸಾಬ್ಇದ್ದರು.