ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಗಣೇಶೋತ್ಸವ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಹೂ, ಹಣ್ಣು ದರ ಏರಿಕೆಯಾಗಿದೆ. ಆದರೆ, ವ್ಯಾಪಾರ ಕಳೆಗುಂದಿದೆ.
ನಗರದ ಗಾಂಧಿ ವೃತ್ತದ ಗುರುವಾರ ಬಳಿ ಹಣ್ಣು, ಹಂಪಲು ಮಾರಾಟಕ್ಕೆ ಇಡಲಾಗಿದ್ದು, ಗ್ರಾಮೀಣ ಭಾಗದಿಂದ ಜನರು ಬಾರದೇ ವ್ಯಾಪಾರ ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ.
ಮಲ್ಲಿಗೆ, ಕನಕಾಂಬರ, ಸಂಪಿಗೆ ಹೂವು ಒಂದು ಮೊಳ ₹100 ಆಗಿದೆ. ಒಂದು ಗುಲಾಬಿ ₹5ರಿಂದ ₹10 ಇದೆ. ಪೇರಲ ₹50 ಕೆಜಿ, ಒಂದು ಸೇಬು ₹20, ಬಾಳೆಹಣ್ಣು ₹50ಗೆ ಡಜನ್, ಒಂದು ಮೊಸಂಬಿ, ಸಂತೂರು, ದಾಳಿಂಬೆ ₹15ರಿಂದ 20 ದರ ಇದೆ.
‘ಗುರುವಾರ ವ್ಯಾಪಾರ ಡಲ್ ಆಗಿದೆ. ಶುಕ್ರವಾರ ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಅಂದು ವ್ಯಾಪಾರವಾಗುವ ಸಾಧ್ಯತೆ ಇದೆ. ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನ ಸಂದಣಿ ಇಲ್ಲ. ಹೀಗಾಗಿ ವ್ಯಾಪಾರವೂ ಆಗಿಲ್ಲ’ ಎಂದು ವ್ಯಾಪಾರಿ ಮಹಮದ್ ಹೇಳುತ್ತಾರೆ.
ಪಿಒಪಿ, ಮಣ್ಣಿ ಮೂರ್ತಿ ಮಾರಾಟ:ಗಾಂಧಿ ವೃತ್ತದ ಬಳಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಪಿಒಪಿ ₹100ರಿಂದ ಆರಂಭವಾದರೆ ಮಣ್ಣಿನ ಗಣೇಶ ಕೂಡ ₹150 ದರ ಇತ್ತು. ಪಿಒಪಿ ದೊಡ್ಡ ಗಾತ್ರದ ಗಣೇಶ ಮೂರ್ತಿ ₹5ರಿಂದ 6 ತನಕ ಇದ್ದರೆ ಮಣ್ಣಿನ ಮೂರ್ತಿ ₹3 ಸಾವಿರ ಬೆಲೆ ಇತ್ತು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಗರಸಭೆ ಬಳಿ ಪರವಾನಗಿ ಪಡೆಯಲು ಮಂಡಳಿಯವರು ಬಂದಿದ್ದರು.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಹಲವಾರು ಷರತ್ತುಗಳನ್ನು ವಿಧಿಸಿಸಿದ್ದರಿಂದ ಈ ಬಾರಿ ಹಲವು ಮಂಡಳಿಗಳು ಆಸಕ್ತಿ ತೋರಿಸಿಲ್ಲ.