ಯಾದಗಿರಿ: ಸಾಲ ಕಟ್ಟದ ಕಾರಣ ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿಯನ್ನು ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಶಂಕರಪ್ಪ, ಶಿವಮ್ಮ ಬಂಧಿತ ಆರೋಪಿಗಳು.
‘₹20 ಲಕ್ಷ ಸಾಲ ತೆಗೆದುಕೊಂಡಿದ್ದ ಐವರಲ್ಲಿ ಒಬ್ಬರು ಪರಾರಿಯಾಗಿದ್ದರು. ಉಳಿದವರು ಸಾಲ ತೀರಿಸುತ್ತಿದ್ದರು. ಆದರೂ ಎಲ್ಲರೂ ಸಾಲ ಮರುಪಾವತಿಸಬೇಕು ಎಂದು ಒತ್ತಡ ಹೇರಿ ಮೂವರು ಮಹಿಳೆಯರನ್ನು ಅಕ್ರಮ ಬಂಧನದಲ್ಲಿ ಇರಿಸಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಮಹಿಳಾ ಪೊಲೀಸ್ ಠಾಣೆ ಸಿಪಿಐ ರಾಘವೇಂದ್ರ ಜಿ.ಎಸ್ ಅವರು ತಿಳಿಸಿದ್ದಾರೆ.
ಅಂತರಾಜ್ಯ ಕಳ್ಳರ ಸೆರೆ
ಯಾದಗಿರಿ: ಬ್ಯಾಂಕ್ನಿಂದ ಹಣ ಪಡೆದು ಹಿಂತಿರುಗುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ದೋಚಿದ್ದ ಅಂತರರಾಜ್ಯ ಕಳ್ಳರನ್ನು ಸುರಪುರ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಸುರಪುರ ನಗರದಲ್ಲಿ ವ್ಯಕ್ತಿಯೊಬ್ಬರು ಜುಲೈ 22 ರಂದು ₹3 ಲಕ್ಷ ಹಣ ಡ್ರಾ ಮಾಡಿಕೊಂಡು ಬೈಕ್ನ ಪೆಟ್ರೋಲ್ ಟ್ಯಾಂಕ್ ಪ್ಯಾಕೆಟ್ನಲ್ಲಿಟ್ಟುಕೊಂಡು ಹೋಗುವಾಗ, ವಡ್ಡರಗಲ್ಲಿ ಹತ್ತಿರ ಬಂದ ಆರೋಪಿಗಳು ಗಮನ ಬೇರೆಡೆ ಸೆಳೆದು ಹಣ ಕಳವು ಮಾಡಿದ್ದರು.
‘ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳರು ಸಿಕ್ಕಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ₹2 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.