ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ವಿಜ್ಞಾನ ಪರೀಕ್ಷೆ ಸುಗಮವಾಗಿ ನಡೆದಿದೆ. ಡಿಬಾರ್ ಆಗಿಲ್ಲ.ಎಸ್ಸೆಸ್ಸೆಲ್ಸಿಯ ಮೂರನೇ ವಿಷಯದ ಪರೀಕ್ಷೆ ಯಾವುದೇ ಅಹಿತಕರ ಘಟನೆ ಇಲ್ಲದೆ ಸರಾಗವಾಗಿ ಜರುಗಿದೆ.
15,471 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 14,205 ವಿದ್ಯಾರ್ಥಿಗಳು ಹಾಜರಾದರೆ 1,266 ಗೈರಾಗಿದ್ದರು. ಕಂಟೇನ್ಮೇಂಟ್ ಜೋನ್ನಿಂದ 426 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 426 ವಲಸೆ ವಿದ್ಯಾರ್ಥಿಗಳಲ್ಲಿ 7 ಜನ ಗೈರಾಗಿದ್ದಾರೆ.
ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ 7 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ತಲುಪಿಸಲು ಸರ್ಕಾರಿ ಬಸ್ 50, 20 ಶಾಲಾ ವಾಹನ ಬಳಕೆ ಮಾಡಿಕೊಳ್ಳಲಾಗುತ್ತಿದೆ.
‘ಸೋಮವಾರ ಜಿಲ್ಲೆಯ ಬಳಿಚಕ್ರ, ಮಾಧ್ವಾರ, ಸೈದಾಪುರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಜುಲೈ 1ರಂದು ಸಮಾಜ ವಿಜ್ಞಾನ, 2ರಂದು ದ್ವಿತೀಯ ಭಾಷೆ, 3ರಂದು ತೃತೀಯ ಭಾಷೆ ಪರೀಕ್ಷೆ ನಡೆಯಲಿದೆ’ ಎಂದು ಡಿಡಿಪಿಐ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
17 ವಿದ್ಯಾರ್ಥಿಗಳು ಗೈರು
ಯರಗೋಳ: ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ವಿಜ್ಞಾನ ಪರೀಕ್ಷೆ ಸುಗಮವಾಗಿ ನಡೆಯಿತು. ಕಂಚಾಗಾರಹಳ್ಳಿ, ಅಲ್ಲಿಪುರ, ಅರಕೇರಾ.ಬಿ, ಬಸವಂತಪುರ, ಕ್ಯಾಸಪನಳ್ಳಿ, ಖಾನಳ್ಳಿ, ವಡ್ನಳ್ಳಿ ಗ್ರಾಮದಿಂದ ಬಸ್, ಬೈಕ್, ಆಟೋಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು.
ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. 277ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು, 17 ವಿದ್ಯಾರ್ಥಿಗಳು ಗೈರಾಗಿದ್ದು, 260 ಜನ ಪರೀಕ್ಷೆ ಬರೆದರು.