ಸೈದಾಪುರ (ಯಾದಗಿರಿ ಜಿಲ್ಲೆ): ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಭಾನುವಾರ ಇಲ್ಲಿ ನಡೆದ ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ 2020–21ನೇ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಾವಣಗೆರೆಯ ಕೇಂದ್ರೀಯ ವಿದ್ಯಾಲಯದ ವೈ.ಹಿ.ಯೋಗಪ್ರಿಯ, ದಕ್ಷಿಣ ಕನ್ನಡ ಜಿಲ್ಲೆಯ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಯಶಸ್ವಿ ಶೆಟ್ಟಿ, ಬಳ್ಳಾರಿಯ ಜಿಂದಾಲ್ ವಿದ್ಯಾಮಂದಿರದ ಸುಮೇಧ ಎಸ್.ಎಸ್ ಮತ್ತು ಗದಗ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾರ್ತಿಕ ಮೋಹನಲಾಲ್ ಅವರು ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ 66 ವಿದ್ಯಾರ್ಥಿಗಳು ವಿಜ್ಞಾನ ಅನ್ವೇಷಣೆಯ ಮಾದರಿಗಳನ್ನು ಪ್ರದರ್ಶಿಸಿದರು. ಅಂತಿಮ ಹಂತಕ್ಕೆ ಆಯ್ಕೆಯಾದ 12 ವಿದ್ಯಾರ್ಥಿಗಳ ಮಾದರಿಗಳನ್ನು 8 ಮಂದಿ ತಜ್ಞರು ಪರೀಶೀಲಿಸಿದರು. ಲಿಖಿತ ಪರೀಕ್ಷೆ ಜೊತೆ ಸಂದರ್ಶನ ನಡೆಸಿ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಅವರಿಗೆ ತಲಾ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ವಿಜ್ಞಾನಿ ಡಾ.ಎಚ್.ಎಲ್.ಭಟ್ ವಿತರಿಸಿದರು.