ಯಾದಗಿರಿ: ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಲು ನೀರಾವರಿ ಸಲಹಾ ಸಮಿತಿ ರಚಿಸಿದ್ದರೂ, ಜಿಲ್ಲೆಯ ರೈತ ಪರ ಹೋರಾಟಗಾರರಿಗೆ ಅದರಲ್ಲಿ ಸ್ಥಾನ ನೀಡಿಲ್ಲ. ಸಮಿತಿಯಲ್ಲಿ ರೈತರಿಗೆ ಪ್ರಾತಿನಿಧ್ಯ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಗುರುವಾರ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಗುಲ್ಬರ್ಗ, ಯಾದಗಿರಿ, ರಾಯಚೂರು, ವಿಜಾಪುರ, ಬಾಗಲಕೋಟೆ ಜಿಲ್ಲೆಗಳ ರೈತರ ಅನುಕೂಲಕ್ಕಾಗಿ ರಚಿಸಿರುವ ನೀರಾವರಿ ಸಲಹಾ ಸಮಿತಿ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ ಎಂದು ಆರೋಪಿಸಿದರು.
ಈ ಜಿಲ್ಲೆಗಳ ಕಾಲುವೆ ಕೊನೆಯಂಚಿನ ರೈತರಿಗೆ ಇನ್ನೂ ನೀರು ಮುಟ್ಟಿಲ್ಲ. ಗುಣಮಟ್ಟದ ಕಾಮಗಾರಿ ಇಲ್ಲದೇ, ರೈತರ ಜಮೀನಿಗೆ ನೀರು ಮುಟ್ಟುವ ಮೊದಲೇ ಒಡೆದು ಹೋಗಿವೆ. ಕಾಲುವೆಗಳಲ್ಲಿ ಹೂಳು ತುಂಬಿದ್ದು, ತೆಗೆಯುವವರಿಲ್ಲದೇ ನೀರು ಹಳ್ಳ ಸೇರುತ್ತಿದೆ ಎಂದು ದೂರಿದರು.
ಜಿಲ್ಲೆಯ ಕೊನೆ ಭಾಗದ ರೈತರಿಗೆ ನೀರು ದೊರಕುವಂತಾಗಬೇಕು. ಎಲ್ಲ ಜಮೀನಿಗೆ ಬತ್ತ, ಹತ್ತಿ ಎಂದು ತಾರತಮ್ಯ ಮಾಡದೇ ನೀರಾವರಿ ಸೌಲಭ್ಯ ಕಲ್ಪಿಸಬೇಕು. ನೀರು ಸದ್ಬಳಕೆಯಾಗಿ ಪೋಲಾಗದಂತೆ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಶಹಾಪುರ, ಸುರಪುರ ಶಾಸಕರು, ಜಿಲ್ಲಾಧಿಕಾರಿಗಳು, ರೈತಪರ ಹೋರಾಟಗಾರರು ಹಾಗೂ ರೈತ ಪ್ರತಿನಿಧಿಗಳನ್ನು ನೀರಾವರಿ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂಬ ಬೇಡಿಕೆಗಳ ಮನವಿ ಸಲ್ಲಿಸಿದರು.
ಸಮಿತಿಯ ಶರಣಭೂಪಾಲರಡ್ಡಿ, ವಿಶ್ವನಾಥರಡ್ಡಿ ಗೊಂದಡಗಿ, ಬಸವರಾಜಪ್ಪಗೌಡ ಹೆಮ್ಮಡಗಿ, ಶರಣಪ್ಪಗೌಡ ಬಿರಾದಾರ, ಚೆನ್ನಾರಡ್ಡಿ ಪಾಟೀಲ, ಅಯ್ಯಣ್ಣ ಹಾಲಬಾವಿ, ಶಿವರಾಜ ಯಳವಾರ ಮತ್ತಿತರರು ಇದ್ದರು.