ತುಮಕೂರು: ಸಾಂಪ್ರಾದಾಯಿಕ ಚರ್ಮ ಕುಶಲಕರ್ಮಿಗಳು ಮತ್ತು ಸಣ್ಣ ಘಟಕದ ಸರಬರಾಜುದಾರರು ತಯಾರಿಸುವ ಅಪ್ಪಟ ಚರ್ಮ ವಸ್ತುಗಳ ಮೇಲೆ ವಿಧಿಸಿರುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಶೇ.13.5ರಿಂದ ವಿನಾಯಿತಿ ನೀಡಬೇಕು ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮ ಗುರುವಾರ ಇಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ರೆಡ್ಕ್ರಾಸ್ ಭವನದಲ್ಲಿರುವ ಲಿಡ್ಕರ್ ಮಳಿಗೆಗೆ ಭೇಟಿ ನೀಡಿ, ಉತ್ಪನ್ನಗಳನ್ನು ಪರಿಶೀಲಿಸಿದ ಅವರು, ಲಿಡ್ಕರ್ ನಿಗಮವನ್ನು ಪುನಶ್ಚೇತನಗೊಳಿಸಲು ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವೆಂದು ಮರು ನಾಮಕರಣ ಮಾಡಿ, ರೂ. 3.50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಆದರೆ ನಿಗಮವನ್ನು ಮತ್ತಷ್ಟು ಸದೃಢಗೊಳಿಸಿ, ಲಾಭದತ್ತ ಕೊಂಡೊಯ್ಯಲು, ಹೆಚ್ಚು ಕುಶಲಕರ್ಮಿಗಳ ಕುಟುಂಬಗಳಿಗೆ ಉದ್ಯೋಗ ಒದಗಿಸಲು ಸರ್ಕಾರದ ನೆರವು ಇನ್ನಷ್ಟು ಬೇಕಾಗಿದೆ ಎಂದರು.
ನಿಗಮವು ಕಳೆದ ವರ್ಷ ಅಕ್ಟೋಬರ್ವರೆಗೆ ರೂ. 2.65 ಕೋಟಿ ವಹಿವಾಟು ನಡೆಸಿದೆ. ಪ್ರಸಕ್ತ ಸಾಲಿನಲ್ಲಿ ರೂ. 7 ಕೋಟಿ ವಹಿವಾಟು ನಡೆಸುವ ಗುರಿ ಇದೆ. ನಿರಂತರ ಉದ್ಯೋಗ ಯೋಜನೆಗೆ 300 ಚರ್ಮ ಕುಶಲಕರ್ಮಿಗಳ ಕುಟುಬಂಗಳನ್ನು ಅಳವಡಿಸಲಾಗಿದೆ.
ರಾಜ್ಯದ ಚರ್ಮ ಕುಶಲಕರ್ಮಿಗಳ ಆರ್ಥಿಕ, ಸಾಮಾಜಿಕ ಉನ್ನತಿಗಾಗಿ ವಿವಿಧ ಯೋಜನೆಯಡಿ ರೂ. 13.33 ಕೋಟಿ ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.