ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಜ.24ರಂದು ಹೈ.ಕ. ಬಂದ್ ಆಚರಿಸುವಂತೆ ಮಾಜಿ ಸಚಿವ ವೈಜನಾಥ ಪಾಟೀಲ ನೇತೃತ್ವದಲ್ಲಿ ಕರೆ ನೀಡಲಾಗಿದೆ. ಇದರಲ್ಲಿ ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು. ತಿದ್ದುಪಡಿ ಬೇಡಿಕೆ ಶೀಘ್ರ ಈಡೇರುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಅಫಜಲಪುರ ತಾಲ್ಲೂಕಿನ ಗೊಬ್ಬೂರವಾಡಿಯ ಜಗದಂಬಾ ದೇವಿ ಸೇವಾಲಾಲ ಆಶ್ರಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ದಿವ್ಯ ಸಂತ ಸಮಾಗಮ ಹಾಗೂ ಸಾಂಸ್ಕೃತಿಕ ಉತ್ಸವ ಸಮಾರಂಭದಲ್ಲಿ ಪೋಹರಾದೇವಿ ದೇವಸ್ಥಾನ ಮತ್ತು ಶಾಲಾ ಕಟ್ಟಡಕ್ಕೆ ಅಡಿಗಲ್ಲು ಹಾಕಿ ಮಾತನಾಡಿದರು.
ಶಿಕ್ಷಣದಿಂದ ಏನೆಲ್ಲ ಪ್ರಗತಿ ಸಾಧಿಸಲು ಸಾಧ್ಯ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕಡೆ ಹೆಚ್ಚಿನ ಗಮನ ನೀಡುವ ಮೂಲಕ ಬಂಜಾರ ಸಮಾಜದವರು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು ಎಂದರು.
ಸಂಸದ ಧರ್ಮಸಿಂಗ್ ಮಾತನಾಡಿ, ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡುವುದು ಅಗತ್ಯ. ಈ ದಿಶೆಯಲ್ಲಿ ಕಾಂಗ್ರೆಸ್ ಕೂಡ ತನ್ನ ಪ್ರಯತ್ನ ಮುಂದುವರಿಸಿದೆ. ಮುಂಬರುವ ಅಧಿವೇಶನದಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದರಲ್ಲಿ ಯಾವುದೇ ಶಂಕೆ ಬೇಡ ಎಂದರು.
ಪೋಹರಾದೇವಿ ಶಕ್ತಿಪೀಠದ ಡಾ. ರಾಮರಾವ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀರವಿಶಂಕರ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಚಿವರಾದ ರೇವುನಾಯಕ ಬೆಳಮಗಿ, ರಾಜೂಗೌಡ, ಶಾಸಕರಾದ ಮಾಲಿಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ, ಡಾ. ಶರಣಪ್ರಕಾಶ ಪಾಟೀಲ, ವಾಲ್ಮೀಕ ನಾಯಕ ಇತರರು ವೇದಿಕೆಯಲ್ಲಿದ್ದರು.