ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪದವಿ ಕೋರ್ಸ್ಗಳ 2ನೇ ಸೆಮಿಸ್ಟರ್ ಕನ್ನಡ ಭಾಷೆ ಪಠ್ಯಪುಸ್ತಕಗಳು ಮುದ್ರಣಗೊಂಡಿದ್ದು, ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಇದರೊಂದಿಗೆ, ಪ್ರಾಧ್ಯಾಪಕರ ಬೋಧನೆಗೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.
ಸೆಮಿಸ್ಟರ್ನ ತರಗತಿಗಳು ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದ್ದರೂ ಪಠ್ಯಪುಸ್ತಕವಿಲ್ಲದೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಜುಲೈ 14ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ಪಠ್ಯವಿಲ್ಲದೆ ಬೋಧನೆ–ಕಲಿಕೆ!’ ವರದಿಯಿಂದ ಎಚ್ಚೆತ್ತಕೊಂಡ ಮೈಸೂರು ವಿಶ್ವವಿದ್ಯಾಲಯದ ‘ಪ್ರಸಾರಾಂಗ’ವು ಪುಸ್ತಕಗಳ ಮುದ್ರಣ ಕಾರ್ಯವನ್ನು ಚುರುಕುಗೊಳಿಸಿತ್ತು.
‘ ವಿವಿಧ ಸೆಮಿಸ್ಟರ್ಗಳಿಗೆ ಅಗತ್ಯವಾಗುವ ‘ಕಲಾ ಗಂಗೋತ್ರಿ’, ‘ವಿಜ್ಞಾನ ಗಂಗೋತ್ರಿ’, ‘ಗಣಕ ಗಂಗೋತ್ರಿ’, ‘ನಿರ್ವಹಣಾ ಗಂಗೋತ್ರಿ’ ಹಾಗೂ ‘ವಾಣಿಜ್ಯ ಗಂಗೋತ್ರಿ’ ಹೆಸರಿನಲ್ಲಿ ಪುಸ್ತಕಗಳನ್ನು ಮುದ್ರಿಸಲಾಗಿದೆ’ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ವಾಣಿಜ್ಯ ಗಂಗೋತ್ರಿಯ 8ಸಾವಿರ ಪ್ರತಿಗಳನ್ನು ಮುದ್ರಿಸಲಾಗಿತ್ತು. ಅದರಲ್ಲಿ 7ಸಾವಿರ ಮಾರಾಟವಾಗಿದೆ. ಉಳಿದವುಗಳನ್ನು ತಲಾ 5ಸಾವಿರ ಮುದ್ರಿಸಲಾಗಿತ್ತು. ಈ ಪೈಕಿ ಸರಾಸರಿ 4ಸಾವಿರ ಪ್ರತಿಗಳು ಮಾರಾಟವಾಗಿವೆ. ಒಟ್ಟು ₹ 4.50 ಲಕ್ಷ ಮೊತ್ತದ ಪುಸ್ತಕಗಳು ಮಾರಾಟವಾಗಿವೆ. ‘ಮುಕ್ತ ಆಯ್ಕೆ’ ವಿಭಾಗದಲ್ಲಿ ‘ಆಡಳಿತಾತ್ಮಕ ಕನ್ನಡ ಕಲಿಕೆ’ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದೆ’ ಎಂದು ತಿಳಿಸಿದರು.