ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ವಾಕ್, ಶ್ರವಣ ದೋಷಕ್ಕೆ ಚಿಕಿತ್ಸೆ

Last Updated 26 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಡಾ.ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯು ದೋಷವುಳ್ಳ ಮಕ್ಕಳ, ವ್ಯಕ್ತಿಗಳ ತಪಾಸಣೆ, ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸುವ ಸರ್ಕಾರೇತರ ಸಂಸ್ಥೆ. ಸಂಸ್ಥೆಯು ತನ್ನ ಮೂಲ ಉದ್ದೇಶದೊಂದಿಗೆ ಸಾಮಾಜಿಕ ಕಳಕಳಿಯೊಂದಿಗೆ ವಾಕ್ ಶ್ರವಣ ಕ್ಷೇತ್ರದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ನಗರದ ಖ್ಯಾತ ಕಿವಿ, ಮೂಗು, ಗಂಟಲು ತಜ್ಞರಾದ ಡಾ.ಎಸ್.ಆರ್. ಚಂದ್ರಶೇಖರ್‌ ಅವರ ಕನಸಿನ ಕೂಸು ಈ ಸಂಸ್ಥೆ. ಬೆಂಗಳೂರಿನ ಸುತ್ತಮುತ್ತಲು ಇರುವ ಗ್ರಾಮಾಂತರ ಪ್ರದೇಶದ ವಾಕ್ ಶ್ರವಣ ದೋಷವಿರುವ ಮಕ್ಕಳು ಹಾಗೂ ವ್ಯಕ್ತಿಗಳ ತಪಾಸಣೆ ಹಾಗೂ ಪುನರ್ವಸತಿಗಾಗಿ ನಿರಂತರವಾಗಿ ಕ್ಯಾಂಪ್‌ಗಳನ್ನು ನಡೆಸಲಾಗುತ್ತಿತ್ತು. ವಾಕ್ ಶ್ರವಣ ಕ್ಷೇತ್ರದಲ್ಲಿ ತಜ್ಞರ ಕೊರತೆಯನ್ನು ಮನಗೊಂಡು
ಡಾ.ಚಂದ್ರಶೇಖರ್ ಬೆಂಗಳೂರು ಪಶ್ಚಿಮ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಲಿಂಗರಾಜಪುರಂನಲ್ಲಿ ಚಿಕಿತ್ಸಾಲಯವನ್ನು ತೆರೆದರು. ನಂತರ ಬೆಂಗಳೂರು ವಿ.ವಿ.ಯ ಮಾನ್ಯತೆಯೊಂದಿಗೆ ಬ್ಯಾಚುಲರ್ ಆಫ್ ಸೈನ್ಸ್ ಇನ್ ಸ್ವೀಚ್ ಅಂಡ್ ಹಿಯರಿಂಗ್ ಕಾಲೇಜು ಪ್ರಾರಂಭಿಸಿದರು.

ಭಾರತ ಸರ್ಕಾರದ ಪುನರ್ವಸತಿ ಕೇಂದ್ರದಿಂದ ಮಾನ್ಯತೆ ಪಡೆದ ಸಂಸ್ಥೆಯು ಮುಂದಿನ ದಿನಗಳಲ್ಲಿ ವಾಕ್ ಶ್ರವಣ ಕ್ಷೇತ್ರದ ಸ್ನಾತಕೋತ್ತರ ಪದವಿ ಕಾಲೇಜನ್ನು ತೆರೆಯಿತು. ಹಾಗೆಯೇ ವಾಕ್‌ ಶ್ರವಣ ದೋಷವಿರುವ ಮಕ್ಕಳಿಗೆ ಶಿಕ್ಷಕರ ಅವಶ್ಯಕತೆಯನ್ನು ಪೂರೈಸುವು ದಕ್ಕಾಗಿ ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಷನ್ ತರಗತಿಗಳನ್ನು ಪ್ರಾರಂಭಿಸಿದರು.

ಇಲ್ಲಿ ಭಾಷಾ ವಿಭಾಗ, ಶ್ರವಣ ವಿಭಾಗ ಹಾಗೂ ಮನೋವಿಜ್ಞಾನ ವಿಭಾಗಗಳಿವೆ. ಭಾಷಾ ವಿಭಾಗದಲ್ಲಿ ಭಾಷಾ ಬೆಳವಣಿಗೆ ಪರೀಕ್ಷೆ, ಉಗ್ಗುವಿಕೆ, ನುಂಗುವ ಸಮಸ್ಯೆ, ಧ್ವನಿ ಪರೀಕ್ಷೆ, ಪಾರ್ಶ್ವವಾಯು ಪೀಡಿತರಿಗೆ ಭಾಷಾ ಪುನರ್ವಸತಿ, ವಾಕ್ ತರಬೇತಿ ಮುಂತಾದ ಸೇವೆಗಳು ಲಭ್ಯವಿದೆ.

ಶ್ರವಣ ವಿಭಾಗದಲ್ಲಿ ಶ್ರವಣ ಪರೀಕ್ಷೆ, ಕಿವಿ ಅಚ್ಚು ಹಾಗೂ ಸೂಕ್ತ ಶ್ರವಣ ಯಂತ್ರದ ಅಳವಡಿಕೆ, ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಯಾದ ಮಕ್ಕಳು, ವ್ಯಕ್ತಿಗಳಿಗೆ ಮ್ಯಾಪಿಂಗ್ ಹಾಗೂ ಆಡಿಟರಿ ವರ್ಬಲ್ ಥೆರಪಪಿ ವರ್ಟಿಗೋ ಮುಂತಾದ ಚಿಕಿತ್ಸೆ ದೊರೆಯುತ್ತದೆ.
ಮನೋವಿಜ್ಞಾನ ವಿಭಾಗದಲ್ಲಿ ಬುದ್ಧಿಮತ್ತೆಯ ಪ್ರಮಾಣವನ್ನು ಕಂಡು ಹಿಡಿಯುವ ಹಾಗೂ ಬುದ್ಧಿಮತೆಯಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸೇವೆಯು ಸೇರಿದಂತೆ ಆಟಿಸಮ್ ಹಾಗೂ ADHD ಕಲಿಕಾ ನ್ಯೂನತೆಯಿಂದ ಮಕ್ಕಳಿಗೆ ವಿಶೇಷ ತರಗತಿಗಳು ನಡೆಯುತ್ತವೆ.

ಶ್ರವಣ ದೋಷವುಳ್ಳ ಮಕ್ಕಳ ತಾಯಂದಿರಿಗೆ ತರಬೇತಿ ನೀಡಲು ‘ಸುನಾದ’ ವಿಶೇಷ ಮಕ್ಕಳ ಶಾಲೆಯನ್ನು ನಡೆಸುತ್ತಿದೆ. ಸಂಸ್ಥೆಯು ಸಂಚಾರಿ ಘಟಕವನ್ನು ಆರಂಭಿಸಿದ್ದು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಹಾಗೂ ವಿಶೇಷ ಸಮ್ಮೇಳನಗಳಲ್ಲಿ ಉಚಿತ ಶ್ರವಣ ಪರೀಕ್ಷೆಯನ್ನು ನಡೆಸುತ್ತಿದೆ.

ಪ್ರತಿವರ್ಷ ಏಪ್ರಿಲ್ ನಾಲ್ಕನೇ ಬುಧವಾರ ಅಂತರಾಷ್ಟ್ರೀಯ ಶಬ್ಧಮಾಲಿನ್ಯ ಜಾಗೃತಿ ದಿನವಾಗಿ ವಿಶ್ವದಾದಂತ್ಯ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯು ಸುತ್ತಮುತ್ತಲಿನ ಜನರಿಗೆ ಈ ದಿನದ ಮಹತ್ವದ ಅರಿವು ಮೂಡಿಸುವುದಕ್ಕಾಗಿ ಏಪ್ರಿಲ್ 27 ಜನಜಾಗೃತಿ ಜಾಥವನ್ನು ಹಮ್ಮಿಕೊಂಡಿದೆ. ಸಂಚಾರಿ ಪೊಲೀಸರಿಗೆ ಶಬ್ದ ಮಾಲಿನ್ಯದ ದುಷ್ಪರಿಣಾಮ ಹಾಗೂ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಉಪನ್ಯಾಸವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಶ್ರವಣದೋಷದ ಬಗ್ಗೆ ಅಧ್ಯಯನ ಮಾಡುತ್ತಿರುವ ಅಂತರಾಷ್ಟ್ರೀಯ ತಂಡದ ಮುಖ್ಯಸ್ಥ ಡಾ.ಜೇಮ್ಸ್ ಹಾಲ್ ಮಾರ್ಟಿನ್ ಅವರಿಂದ ಅಭಿವೃದ್ಧಿಪಡಿಸಲಾದ ‘ಜೌಲಿನ್’ ಇದರ ಪ್ರತಿರೂಪ ‘ಕರ್ಣ’ ಎಂಬ ಮನುಷ್ಯಾಕೃತಿಯನ್ನು ಬಳಸಿಕೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT