ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಸುರೇಶ್ ಜೊತೆ ಸಂದರ್ಶನ: ಅಭಿವೃದ್ಧಿ, ಗ್ಯಾರಂಟಿ ನನ್ನ ಚುನಾವಣಾ ಅಸ್ತ್ರ

ಜನರ ಕಷ್ಟಕ್ಕೆ ಮಿಡಿಯುವವರು ನಿಜವಾದ ಹೃದಯವಂತರು
Published 19 ಏಪ್ರಿಲ್ 2024, 0:03 IST
Last Updated 19 ಏಪ್ರಿಲ್ 2024, 0:03 IST
ಅಕ್ಷರ ಗಾತ್ರ

‘ಯಾವುದೇ ಸವಾಲು ಕಾಣಿಸುತ್ತಿಲ್ಲ. ಯಾರೇ ತಮ್ಮನ್ನು ಟಾರ್ಗೆಟ್ ಮಾಡಿದರೂ ಅಸ್ತ್ರವಿರುವುದು ಜನರ ಕೈಯಲ್ಲಿ. ಕ್ಷೇತ್ರಕ್ಕೆ ತಾವು ಮಾಡಿರುವ ಕೆಲಸ ಹಾಗೂ ಸರ್ಕಾರದ ಗ್ಯಾರಂಟಿಗಳು ಹಿಡಿಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸುವ ರಾಜ್ಯದ ಏಕೈಕ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌, ಚುನಾವಣೆ, ರಾಜ್ಯದ ರಾಜಕೀಯ ಕುರಿತು ಮಾತನಾಡಿದ್ದಾರೆ.

 ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ಈ ಸಲದ ಚುನಾವಣೆಯಲ್ಲಿ ನಿಮಗಿರುವ ಸವಾಲುಗಳೇನು? ಮೈತ್ರಿಯಿಂದ ಸ್ಪರ್ಧೆ ತುರುಸುಗೊಂಡಿದೆಯೇ?

– ಅಂತಹ ಯಾವುದೇ ಸವಾಲು ನನಗೆ ಕಾಣುತ್ತಿಲ್ಲ. ನನ್ನ ಚುನಾವಣಾ ರಾಜಕೀಯ ಕಾರ್ಯಶೈಲಿಯಲ್ಲೂ ಬದಲಾವಣೆ ಆಗಿಲ್ಲ. ಜನರು ಕೊಟ್ಟ ಅಧಿಕಾರದಿಂದ ಅವರ ಜೊತೆಗಿದ್ದುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ಈಗ ಅವರ ಬಳಿಗೆ ಹೋಗಿ ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಬಿಜೆಪಿ–ಜೆಡಿಎಸ್‌ ಮೈತ್ರಿ ಹೊಸತೇನಲ್ಲ. ಹಿಂದಿನ ಚುನಾವಣೆಗಳಲ್ಲಿ ಅವರಿಬ್ಬರ ಅಧಿಕೃತ ಮತ್ತು ಅನಧಿಕೃತ ಹೊಂದಾಣಿಕೆಯ ರಾಜಕೀಯ ಎದುರಿಸಿ ಗೆದ್ದಿದ್ದೇನೆ. ಅಸ್ತಿತ್ವಕ್ಕಾಗಿ ಬಿಜೆಪಿ ಅಪ್ಪಿಕೊಂಡಿರುವ ಜೆಡಿಎಸ್‌ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.

* ತೆರಿಗೆ ಅನ್ಯಾಯದ ಕುರಿತು ನೀವು ಎತ್ತಿದ ದನಿಯು ಗೆಲುವಿಗೆ ಪೂರಕವೇ?

– ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಆಗಿರುವ ಅನ್ಯಾಯದ ಕುರಿತು ನಾನು ಪ್ರಸ್ತಾಪ ಮಾಡಿದ್ದೇನೆಯೇ ಹೊರತು ಬೇರೇನೂ ಅಲ್ಲ.  ನನ್ನ ಮಾತುಗಳ ಸತ್ಯಾಸತ್ಯತೆಯನ್ನು ದಾಖಲೆ ಸಮೇತ ಜನರ ಮುಂದಿಟ್ಟಿದ್ದೇನೆ. ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಮತ ಚಲಾಯಿಸುತ್ತಾರೆಂಬ ವಿಶ್ವಾಸವಿದೆ.

* ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿ ನಿಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾತುಗಳಿವೆ?

– ಯಾರನ್ನು ಗೆಲ್ಲಿಸಬೇಕು ಮತ್ತು ಸೋಲಿಸಬೇಕು ಎಂದು ತೀರ್ಮಾನಿಸುವುದು ಜನ. ಮೋದಿ–ಅಮಿತ್‌ ಶಾ ಜೋಡಿ ಅಲ್ಲ. ಯಾರೇ ಟಾರ್ಗೆಟ್ ಮಾಡಿದರೂ ಅಂತಿಮ ಅಸ್ತ್ರವಿರುವುದು ಜನರ ಕೈಯಲ್ಲಿ.

* ನೀವು ದರ್ಪ, ದೌರ್ಜನ್ಯ ಮಾಡುತ್ತಿದ್ದೀರಿ ಎಂದು ಆಪಾದಿಸಿರುವ ಮೈತ್ರಿಕೂಟ, ಹೃದಯವಂತರಾಗಿರುವ ಸಿ.ಎನ್. ಮಂಜುನಾಥ್  ಪಕ್ಷಾತೀತವಾಗಿ ಮನ್ನಣೆ ಪಡೆಯಯುತ್ತಿದ್ದಾರೆಂದು ಪ್ರಚಾರ ಮಾಡುತ್ತಿದೆಯಲ್ಲ?

– ಬಿಜೆಪಿಯವರು ಜನರ ಭಾವನೆ ಕೆರಳಿಸುವ ಹಾಗೂ ವೈಯಕ್ತಿಕ ವಿಷಯ ಬಿಟ್ಟರೆ ಎಂದಾದರೂ ಅಭಿವೃದ್ಧಿ ವಿಷಯಗಳ ಕುರಿತು ಮಾತನಾಡಿದ್ದಾರೆಯೇ? ಮತದಾರರಿಂದ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಎರಡೂ ಪಕ್ಷಗಳ ಮುಖಂಡರು ಕಾಂಗ್ರೆಸ್‌ನತ್ತ ಬರುತ್ತಿರುವುದು ಮೈತ್ರಿ ಪಕ್ಷಗಳ ನಿದ್ದೆಗೆಡಿಸಿದೆ. ಅದಕ್ಕಾಗಿಯೇ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. 

* ಗ್ಯಾರಂಟಿ ಯೋಜನೆಗಳು ನಿಮ್ಮ ಕೈ ಹಿಡಿಯಲಿವೆಯೇ?

– ಸಂಕಷ್ಟದಲ್ಲಿದ್ದ ಜನರನ್ನು ಯೋಜನೆಗಳು ತಲುಪಿವೆ. ಮಹಿಳೆಯರಷ್ಟೇ ಅಲ್ಲದೆ ಇಡೀ ಕುಟುಂಬದ ಸಬಲೀಕರಣಕ್ಕೆ ಕಾರಣವಾಗಿವೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಕಾಂಗ್ರೆಸ್‌ಗೆ ಮತದಾರರು ಗೆಲುವಿನ ಕಾಣಿಕೆ ಕೊಡಲಿದ್ದಾರೆ. ಏನೂ ಕೆಲಸ ಮಾಡದ ಬಿಜೆಪಿ–ಜೆಡಿಎಸ್‌ನವರು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ.

* ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ನಿಮ್ಮ ಸಹೋದರ ಶಿವಕುಮಾರ್‌ ಅವರಿಗೆ ಚುನಾವಣೆ ಪ್ರತಿಷ್ಠೆ ಅಲ್ಲವೆ?

– ಹಾಗೇನಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಅವರ ನಾಯಕತ್ವದಲ್ಲಿ ಎಲ್ಲರೂ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಮುಖ್ಯಮಂತ್ರಿ ಹುದ್ದೆ ಕುರಿತು ಸದ್ಯ ಯಾವುದೇ ಚರ್ಚೆ ನಡೆದಿಲ್ಲ. ಆದರೆ, ಶಿವಕುಮಾರ್ ಅವರು ಸಹ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿದೆ. 

* ಕ್ಷೇತ್ರಕ್ಕೆ ನಿಮ್ಮ ಅಭಿವೃದ್ಧಿ ಅಜೆಂಡಾ ಏನು? ಜನ ಯಾಕೆ ಮತ ಹಾಕಬೇಕು?

– ನಾನು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಮತ ಹಾಕಿ ಎಂದು ಕೇಳುತ್ತಿದ್ದೇನೆ. ನಾನು ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಮುಂದಡಿ ಇಟ್ಟಿದ್ದೇನೆ. ಇವೆಲ್ಲವೂ ಸಾಕಾರವಾಗಬೇಕಾದರೆ ಜನ ಮತ್ತೊಮ್ಮೆ ನನಗೆ ಅವಕಾಶ ನೀಡಬೇಕು.

* ನಿಮ್ಮ ಎದುರಾಳಿ ಕುರಿತು ನಿಮ್ಮ ಅಭಿಪ್ರಾಯವೇನು?

– ಅವರೊಬ್ಬ ಉತ್ತಮ ವೈದ್ಯರು.ಎಚ್.ಡಿ. ದೇವೇಗೌಡರ ಅಳಿಯ, ಎಚ್‌.ಡಿ. ಕುಮಾರಸ್ವಾಮಿ ಅವರ ಬಾಮೈದ ಅಷ್ಟೆ.

"ಇಷ್ಟಕ್ಕೂ ಮಂಜುನಾಥ್ ಒಬ್ಬರೇ ಹೃದಯವಂತರೇ. ಅವರಿಗೆ ಮಾತ್ರ ಹೃದಯವಿದೆಯೇ? ಉಳಿದವರಿಗೆ ಇಲ್ಲವೆ? ಜನರ ಕಷ್ಟಕ್ಕೆ ಮಿಡಿಯುವವರು ನಿಜವಾದ ಹೃದಯವಂತರು. ಆ ಕೆಲಸವನ್ನು ನಾನು ಮತ್ತು ನನ್ನ ಪಕ್ಷ ಮಾಡಿಕೊಂಡು ಬಂದಿದೆ"

– ಡಿ.ಕೆ. ಸುರೇಶ್‌ ಬೆಂ.ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT